ಪ್ರಜಾಸ್ತ್ರ ಫಾಲೋ ಅಪ್ ಸ್ಟೋರಿ:
ಸಿಂದಗಿ: ಪಟ್ಟಣದಲ್ಲಿರುವ ಸಾರ್ವಜನಿಕ ಸೇವೆ ನೀಡುವ ಇಲಾಖೆಗಳ ಅಧಿಕಾರಿಗಳು ಹೇಗಿದ್ದಾರೆ ಅಂದ್ರೆ, ಯಾರು ಏನ್ ಹೇಳಿದ್ರೂ ತಲೆ ಅಲ್ಲಾಡಿಸಿ ಯೆಸ್ ಅನ್ನುವುದು. ಆಮೇಲೆ ಅದು ಅವರ ನೆನಪಿಗೆ ಸಹ ಇರುವುದಿಲ್ಲ. ಜನರಿಗೆ ಒಳ್ಳೆಯದಾಗುವ ಕೆಲಸಗಳಿಂದ ಮೊದ್ಲು ದೂರ ಉಳಿಯುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ, ಲೋಕಾಯುಕ್ತ ಅಧಿಕಾರಿಗಳ ಮಾತಿಗೂ ಕಿಮ್ಮತ್ತು ಕೊಡ್ತಿಲ್ಲ ಅನ್ನೋದು.
ಸೆಪ್ಟೆಂಬರ್ 13ರಂದು, ಪಟ್ಟಣದ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಕುಂದು ಕೊರತೆಗಳ ಸಭೆ ನಡೆದಿದೆ. ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ ಅವರು, ವಾರದೊಳಗೆ ತಾಲೂಕಿನ ಪ್ರತಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಸಂಪರ್ಕಿಸಬೇಕಾದ ಅಧಿಕಾರಿಗಳ ಹೆಸರು, ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳ ನಂಬರ್ ಇರುವ ಬೋರ್ಡ್ ಅನ್ನು ಕಡ್ಡಾಯವಾಗಿ ಹಾಕಲು ಸೂಚಿಸಿದ್ರು. ತಪ್ಪಿದ್ರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ರು.
ಪಟ್ಟಣದಲ್ಲಿರುವ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯ್ತಿ, ಪುರಸಭೆ, ಸರ್ಕಾರಿ ಆಸ್ಪತ್ರೆ ಹಾಗೂ ಕೆಇಬಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗೆ ಹೋದ್ರೂ ಲೋಕಾಯುಕ್ತ ಡಿವೈಎಸ್ಪಿ ಅವರು ಸೂಚಿಸಿದ ಬೋರ್ಡ್ ಕಾಣಿಸುವುದಿಲ್ಲ. ಕೆಇಬಿಯಲ್ಲಿ ಹಾಕಿರುವ ಬೋರ್ಡ್ ನಲ್ಲಿ ಸ್ವಇಲಾಖೆ ಅಧಿಕಾರಿಗಳ ಹೆಸರು, ನಂಬರ್ ಇದೆ. ಲೋಕಾಯುಕ್ತರ ಮತ್ತು ಎಸಿಬಿ ಅವರ ನಂಬರ್ ಪತ್ತೆಯಿಲ್ಲ. ಹೀಗಾಗಿ ಇಷ್ಟಾದ್ರೂ ಹಾಕಿದ್ದಾರೆ ಅಂತಾ ಖುಷಿ ಪಡಬೇಕು.
ಲೋಕಾಯುಕ್ತ ಅಧಿಕಾರಿಗಳು ಸೂಚಿಸಿ ಅದಾಗ್ಲೇ ಒಂದು ವಾರ ಆಗಿದೆ. ಯಾರಿಗೂ ಇದರ ಬಗ್ಗೆ ಗಮನವೇ ಇಲ್ಲವೋ.. ಬೇಕೆಂದು ಸುಮ್ಮನೆ ಇದ್ದಾರೋ ಅನ್ನೋ ಪ್ರಶ್ನೆ ಮೂಡಿದೆ. ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸಭೆ ನಡೆದಿದೆ. ಅಲ್ಲಿಯೇ ಆದೇಶ ಪಾಲನೆ ಮಾಡಿಲ್ಲ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ತಾರೆ ಕಾದು ನೋಡಬೇಕು.