ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ ಪ್ರಕರಣವೆಂದರೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಇದ್ದ ಲ್ಯಾಪ್ ಟಾಪ್ ಬ್ಯಾಗ್. ಅದು ಪಕ್ಕಾ ಆದ ಬಳಿಕ, ನುರಿತ ಸ್ಪೆಷಲ್ ಅಧಿಕಾರಿಗಳು ಸಜೀವ ಬಾಂಬ್ ನ್ನ ಸ್ಫೋಟಿಸಿ ಬಹುದೊಡ್ಡ ಅನಾಹುತ ತಪ್ಪಿಸಿದ್ರು.
ಇಂದು ಬೆಳ್ಳಂಬೆಳಗ್ಗೆ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಆದಿತ್ಯರಾವ ಪೊಲೀಸರಿಗೆ ಶರಣಾಗಿದ್ದಾನೆ. ಅದು ಮಾರುವೇಷದಲ್ಲಿ ಬಂದ ಆದಿತ್ಯರಾವ, ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿ ಐಜಿ ಕಚೇರಿಗೆ ಬಂದು ಪೊಲೀಸ್ರಿಗೆ ಶರಣಾಗಿದ್ದಾನೆ. ಲಾರಿಯಲ್ಲಿ ಬೆಂಗಳೂರಿಗೆ ಬಂದ ಈತ, ಡಿಜಿ ಐಜಿ ನೀಲಮಣಿ ಅವರ ಎದುರು ಬಾಂಬ್ ಇಟ್ಟುದ್ದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಹಿನ್ನೆಲೆ:
ಸಧ್ಯ ಪೊಲೀಸರ ವಶದಲ್ಲಿರುವ ಬಾಂಬರ್ ಆದಿತ್ಯರಾವ ಹಿನ್ನೆಲೆ ನೋಡಿದ್ರೆ, ಉಡುಪಿಯ ಮಣಿಪಾಲ ನಿವಾಸಿಯಾಗಿದ್ದಾನೆ. 40 ವರ್ಷದ ಆರೋಪಿ, ಮೆಕಾನಿಕಲ್ ಇಂಜಿನಿಯರ್ ಪದವಿ ಮುಗಿಸಿದ್ದಾನೆ. ಆದ್ರೆ, ಈತ ಹೇಳಿಕೊಳ್ಳುವ ಕೆಲಸ ಯಾವುದನ್ನೂ ಸರಿಯಾಗಿ ಮಾಡ್ತಿರ್ಲಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಸಧ್ಯ ಅಡುಗೆ ಕೆಲಸ ಮಾಡ್ತಿದ್ದ ಅನ್ನೋದು ತಿಳಿದು ಬಂದಿದೆ.
ಬಾಂಬರ್ ಆಗಿದ್ದು:
ಶಂಕಿತ ಆರೋಪಿ ಆದಿತ್ಯರಾವ, ಬಾಂಬ್ ಬಗ್ಗೆ 1 ವರ್ಷದಿಂದ ತರಬೇತಿ ಪಡೆದ್ದನಂತೆ. ಅದು ಎಲ್ಲಿ? ಏನು ಅನ್ನೋದು ತಿಳಿಯಬೇಕಿದೆ. ಅಲ್ದೇ, ಯೂಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿತಿದ್ದೆ ಅಂತಾ ಹೇಳಿದ್ದಾನೆ. ಇದೀಗ ಪೊಲೀಸರ ವಶದಲ್ಲಿರುವ ಶಂಕಿತ ಆರೋಪಿಯನ್ನ ಹೆಚ್ಚಿನ ವಿಚಾರಣೆಗಾಗಿ ಅಜ್ಞಾತಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ. ಹೀಗಾಗಿ ಮಂಗಳೂರು ಪೊಲೀಸ್ರು ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ. ಈತನ ಪತ್ತೆಗಾಗಿ ಮಂಗಳೂರು ಪೊಲೀಸ್ರು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ, ಮೈಸೂರು, ಹಾಸನ ಸೇರಿದಂತೆ ಅನೇಕ ಕಡೆ ಸರ್ಚ್ ನಡೆಸಿದ್ರು.
3 ಬಾರಿ ಹುಸಿ ಬಾಂಬ್ ಕರೆ ಮಾಡಿದ್ದ:
ಶಂಕಿತ ಆರೋಪಿ 2018ರಲ್ಲಿ ಸಹ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಮೆಜೆಸ್ಟಿಕ್ ಬಳಿಯಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನ ಸ್ಪೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ. ಶಂಕಿತ ಆರೋಪಿ ಆದಿತ್ಯರಾವ ಮೂರು ಬಾರಿ ಹುಸಿ ಬೆದರಿಕೆ ಕರೆಗಳನ್ನ ಮಾಡಿದ್ದ. ಇದಕ್ಕಾಗಿ ಒಂದಿಷ್ಟು ಕಾಲ ಜೈಲುವಾಸ ಸಹ ಅನುಭವಿಸಿ ಬಂದಿದ್ದ. ಇದೀಗ ಸ್ಫೋಟಕ್ಕೆ ಸ್ಕೆಚ್ ಹಾಕಿ ಪೊಲೀಸ್ರ ಅತಿಥಿಯಾಗಿದ್ದಾನೆ.