ಪ್ರಜಾಸ್ತ್ರ ಸುದ್ದಿ
ಸಿಂದಗಿ: ಅನಾರೋಗ್ಯದಿಂದ ನಿಧನರಾದ ಮಾಜಿ ಸಚಿವರು, ಹಾಲಿ ಶಾಸಕರೂ ಆಗಿದ್ದ ಎಂ.ಸಿ ಮನಗೂಳಿ(85) ಅವರು ಶುಕ್ರವಾರ ಪಂಚಭೂತಗಳಲ್ಲಿ ಲೀನವಾದರು. ಬುಧವಾರ ಮಧ್ಯರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶುಕ್ರವಾರ ಮಧ್ಯಾಹ್ನ ಪಟ್ಟಣದ ಹೆಚ್.ಜೆ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯ್ತು.
ಇದಕ್ಕೂ ಮೊದ್ಲು ಸಕಲ ಸ್ವಾಮೀಜಿಗಳ ಸಮ್ಮುಖದಲ್ಲಿ ಕ್ರಿಯಾಸಮಾಧಿ ನಡೆಸಲಾಯ್ತು. ಇದಕ್ಕೆ ಅಂದಾಜು 5 ಸಾವಿರ ವಿಭೂತಿಗಳನ್ನ ಬಳಸಲಾಗಿದೆ. ತದನಂತರ ಮಂತ್ರಘೋಷಣೆಗಳೊಂದಿಗೆ ಶ್ರೀಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಲಾಯ್ತು.
ಅಂತಿಮ ದರ್ಶನ ವೇಳೆ ಭಾಗವಹಿಸಿದ ಶ್ರೀಗಳು
ಈ ವೇಳೆ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು, ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು, ಸಿಂದಗಿಯ ಸಾರಂಗ ಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಬೋರಗಿ ಪುರದಾಳದ ಭೀಮಾಶಂಕರ ಮಠದ ಮಹಾಸ್ವಾಮಿಗಳು, ಕನ್ನೊಳ್ಳಿ ವಿರಕ್ತಮಠದ ಶ್ರೀಗಳು, ಕಲಕೇರಿ ಮಡಿವಾಳೇಶ್ವರ ಸ್ವಾಮೀಜಿಗಳು, ಸಿಂದಗಿಯ ಗುರುದೇವ ಆಶ್ರಮದ ಶ್ರೀಸಾಂತಗಂಗಾಧರ ಶಿವಾಚಾರ್ಯರು, ಗೋಲಗೇರಿಯ ಗೊಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ಹೊಳೆಪ್ಪ ಶರಣರು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಿದ್ರು.
ರಾಜಕೀಯ ಗಣ್ಯರ ನುಡಿ ನಮನ
ಇನ್ನು ಅಂತಿಮ ವಿಧಿ ವಿಧಾನಕ್ಕೂ ಪೂರ್ವದಲ್ಲಿ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದ್ರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಡಿ ರೇವಣ್ಣ, ಡಿಸಿಎಂ ಗೋವಿಂದ ಕಾರಜೋಳ, ಎಂ.ಬಿ ಪಾಟೀಲ, ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್ ಪಾಟೀಲ ನಡಹಳ್ಳಿ, ಯಶವಂತರಾಯಗೌಡ, ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಅಶೋಕ ಶಾಬಾದಿ, ರಮೇಶ ಭೂಸನೂರ, ಶರಣಪ್ಪ ಸುಣಗಾರ, ಅಪ್ಪು ಪಟ್ಟಣಶೆಟ್ಟಿ, ನಾಡಗೌಡ ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸಿದ್ರು.
ನಗರದಲ್ಲಿ ಮೆರವಣಿಗೆ
ಇನ್ನು ಸ್ವಗೃಹದಿಂದ ಸುಮಾರು ಬೆಳಗ್ಗೆ 9 ಗಂಟೆಯಿಂದ ಮೆರವಣಿಗೆ ಪ್ರಾರಂಭಿಸಿ ವಿವೇಕಾನಂದ ಸರ್ಕಲ್, ಎಸ್ ಬಿಐ ರೋಡ್, ಹಳೆ ಬಜಾರ್, ಟಿಪ್ಪು ಸುಲ್ತಾನ್ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಬಸವೇಶ್ವರ ವೃತ್ತದ ಮೂಲಕ ಸಾಗಿ ಹೆಚ್.ಜಿ ಕಾಲೇಜು ಆವರಣದವರೆಗೂ ಮೆರವಣಿಗೆ ನಡೆಸಲಾಯ್ತು. ಈ ವೇಳೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿದ್ರು. ಬಳಿಕ ಅಂತಿಮ ದರ್ಶನ ಪಡೆದರು.