ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಲ್ಲಹಳ್ಳಿ ಬಳಿಯ ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇದರ ಜೊತೆಗೆ ಮನೆ, ವಿದ್ಯುತ್ ಕಂಬಗಳು, ನಿತ್ಯ ಸಂಚರಿಸುವ ರಸ್ತೆಗಳಿಗೂ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ಆದಷ್ಟು ಬೇಗ ಕ್ರಮ ತೆಗೆದುಕೊಂಡು ಈ ಭಾಗದ ರೈತರಿಗೆ ಪರಿಹಾರ ನೀಡಬೇಕೆಂದು ಮಾಜಿ ಸಚಿವ ಹಾಗೂ ಸಿಂದಗಿ ಮತಕ್ಷೇತ್ರದ ಶಾಸಕರಾಗಿರುವ ಎಂ.ಸಿ ಮನಗೂಳಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
1996ರಲ್ಲಿ ನಿರ್ಮಾಣವಾದ ಕಾಲುವೆಯ 73ನೇ ಕಿಲೋ ಮೀಟರ್ ನಲ್ಲಿ ಆಕಸ್ಮಿಕವಾಗಿ ಕಾಲುವೆ ಒಡೆದ ಪರಿಣಾಮ ಸುಮಾರು 2000ದಿಂದ 2,500 ಎಕರೆಯಲ್ಲಿನ ಬೆಳೆಗಳು ಹಾಳಾಗಿವೆ. ಈ ಸಂಬಂಧ ರೈತರಿಗೆ ಪರಿಹಾರ ನೀಡಬೇಕೆಂದು ಸಿಎಂ ಯಡಿಯೂರಪ್ಪ, ಜಲ ಸಂಪನ್ಮೂಲ ಇಲಾಖೆ ಹಾಗೂ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.