ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಮಾಡಿರುವ ಟ್ವೀಟ್ ಇದೀಗ ಭಾರೀ ಸದ್ದು ಮಾಡ್ತಿದೆ. ನಿನ್ನೆ ಬಾಗಲಕೋಟೆಯಲ್ಲಿ ಮಾತ್ನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು, ಸ್ಪೀಕರ್ ವಿರುದ್ಧ ಏಕವಚನದಲ್ಲಿ ಮಾತ್ನಾಡಿದ್ರು. ಅವನ್ಯಾರೋ ಪುಣ್ಯಾತ್ಮ ಸ್ಪೀಕರ್ ಮಾಡಿದ್ದಾರೆ. ಅವನು ಹೊಸಬ. ಅವನಿಗೆ ಏನು ಗೊತ್ತಿಲ್ಲ. ರಾಜ್ಯದಲ್ಲಿ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಗೆ ಇಷ್ಟೇ ಮಾತಾಡಿ ಎಂದು ಯಾರೂ ಹೇಳಿಲ್ಲ. ಅವನ್ಯಾರೋ ಹೇಳ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು.
ಇದಕ್ಕೆ ಇಂದು ಬೆಳ್ಳಂಬೆಳಗ್ಗೆ ಟ್ವೀಟ್ ಮಾಡಿರುವ ಸಚಿವರು, ‘ಓ ದೇವರೇ.. ರಾಜ್ಯದ ಪ್ರತಿಪಕ್ಷದ ನಾಯಕರು ವಿಧಾನಸಭೆಯ ಅಧಿವೇಶನದ ಸಮಯದಲ್ಲಿ ಸದನದಲ್ಲಿಯಾದರೂ ಮಾನ್ಯ ಸಭಾಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸದಂತೆ ಬುದ್ದಿ ಕೊಡು’ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅನೇಕರು ರೀ ಟ್ವೀಟ್ ಮಾಡಿದ್ದು, ನೆರೆ ಪರಿಹಾರ ತಂದು ಕೊಡುವಂತೆ ಬುದ್ದಿ ಕೊಡು. ವಸತಿ ಶಾಲೆ ಶಿಕ್ಷಕರ ನೇಮಕಾತಿ ಬಗ್ಗೆ ಹೇಳುವುದಕ್ಕೆ ಬುದ್ದಿ ಕೊಡು ಅಂತಾ ಟ್ವೀಟ್ ಮಾಡುವ ಮೂಲಕ ಸಚಿವರ ಕಾಲೆಳೆದಿದ್ದಾರೆ.