ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ, ಶಾಸಕ ಬಿ.ವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಈ ಮೂಲಕ ಚುನಾವಣೆ ಸೋಲಿನ ಬಳಿಕ ನೂತನ ಸಾರಥಿ ಯಾರು ಅನ್ನೋದಕ್ಕೆ ತೆರೆ ಬಿದ್ದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಹಲವು ಘಟಾನುಘಟಿ ನಾಯಕರು ಪೈಪೋಟಿಯಲ್ಲಿದ್ದರು. ಅವರೆಲ್ಲರನ್ನು ಬಿಟ್ಟು ಹೈಕಮಾಂಡ್ ಬಿಎಸ್ವೈ ಪುತ್ರನಿಗೆ ಅವಕಾಶ ನೀಡಿದೆ. ಈ ಮೂಲಕ ಈ ಹಿಂದೆ ತಂದೆ ನಿರ್ವಹಿಸಿದ್ದ ಜವಾಬ್ದಾರಿಯನ್ನು ಇದೀಗ ಮಗನ ಪಾಲಿಗೆ ಬಂದಿದೆ. ಇದರೊಂದಿಗೆ ಪುತ್ರನಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕೊಡಿಸುವಲ್ಲಿ ಬಿಎಸ್ವೈ ಯಶಸ್ವಿಯಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದ ವಿಜಯೇಂದ್ರಗೆ ಟಿಕೆಟ್ ನೀಡದೆ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿ ಹೊಸ ಜವಾಬ್ದಾರಿ ಹೊರಿಸಿತ್ತು. ಯಡಿಯೂರಪ್ಪ ಚುನಾವಣೆ ರಾಜಕೀಯದಿಂದ ಹಿಂದೆ ಸರಿದು ಮಗನಿಗೆ ದಾರಿ ಮಾಡಿದ್ದಾರೆ. ಹೀಗಾಗಿ ಶಿಕಾರಿಪುರದಿಂದ 2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಅನಾಯಾಸವಾಗಿ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶ ಮಾಡಿದರು. ಈಗ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ಬಿಎಸ್ವೈ ಕುಟುಂಬದ ವಿರುದ್ಧ ಸದಾ ಕತ್ತಿ ಮಸಿಯುತ್ತಿದ್ದವರಿಗೆ ದೊಡ್ಡ ಹೊಡೆತ ಬಿದ್ದಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಕಾದು ನೋಡಬೇಕು.