ಪ್ರಜಾಸ್ತ್ರ ಅಪರಾಧ ಸುದ್ದಿ
ಕೋಲಾರ: ಎರಡು ದಿನಗಳ ಹಿಂದೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಮುಳಬಾಗಿಲು ನಗರಸಭೆ ಸದಸ್ಯನನ್ನು ಮಂಗಳವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮುತ್ಯಾಲಪೇಟೆ ನಿವಾಸಿ ಜಗನ್ ಮೋಹನ್ ರೆಡ್ಡಿ ಕೊಲೆಯಾದ ನಗರಸಭೆ ಸದಸ್ಯ.
ಗಂಗಮ್ಮನ ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡಿ ಪೂಜೆ ಮಾಡುತ್ತಿದ್ದರು. ಅದರಂತೆ ಇಂದು ಪೂಜೆ ಸಲ್ಲಿಸಲು ಬಂದಾಗ ಐವರು ದುಷ್ಕರ್ಮಿಗಳು ದಾಳಿ ನಡೆಸಿ ಹತ್ಯೆ ನಡೆಸಿದ್ದಾರೆ. ಘಟನೆ ವಿಷಯ ತಿಳಿದು ಕೋಲಾರ ಎಸ್ಪಿ ಡಿ.ದೇವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಲ್ಕು ದಿಕ್ಕುಗಳಲ್ಲಿರುವ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ.
ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಆಪ್ತನಾಗಿದ್ದ ಜಗನ್ ಮೋಹನ್ ರೆಡ್ಡಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಹತ್ಯೆ ಹಿನ್ನೆಲೆಯಲ್ಲಿ ನಗರದಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ಘಟನೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನದಲ್ಲಿ ಜೆಡಿಎಸ್ ಸದಸ್ಯನ ಹತ್ಯೆ ಪ್ರಕರಣ ಮಾಸುವ ಮೊದಲೇ ಕೋಲಾರದಲ್ಲೊಂದು ಹತ್ಯೆಯಾಗಿದೆ.