ಪ್ರಜಾಸ್ತ್ರ ಸುದ್ದಿ
ಜಮಖಂಡಿ: 2023ರ ವಿಧಾನಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ. ಅದರಲ್ಲೂ ಮುಖ್ಯಮಂತ್ರಿ ರೇಸಿನಲ್ಲಿ ಪ್ರತಿಯೊಂದು ಪಕ್ಷದಿಂದ ನಾಲ್ಕು ಐದು ನಾಯಕರಿದ್ದಾರೆ. ಅದರಲ್ಲಿ ಕೆಲವರ ಹೆಸರು ಬಹಿರಂಗವಾಗಿ ಹೇಳಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೆಸರನ್ನು ಅಭಿಮಾನಿಗಳು ಹೇಳುತ್ತಿದ್ದರೂ, ಇವರ ಜೊತೆಗೆ ಇನ್ನು ಅನೇಕರಿದ್ದಾರೆ. ಅಭಿಮಾನಿಗಳ ಕಡೆಯಿಂದ ಮುಂದಿನ ಮುಖ್ಯಮಂತ್ರಿ ಇವರೆ ಎಂದು ಹೇಳಿಸುವುದು ರಾಜಕೀಯ ನಾಯಕರ ಟ್ರಿಕ್ಸ್ ಎನ್ನಲಾಗುತ್ತೆ. ಬಿಜೆಪಿಯಲ್ಲೂ ಮುಂದಿನ ಮುಖ್ಯಮಂತ್ರಿ ಚರ್ಚೆ ಶುರುವಾಗಿದೆ.
ಸಚಿವ ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾಕಿರುವ ಬ್ಯಾನರ್ ನಲ್ಲಿ ಮುಂದಿನ ಮುಖ್ಯಮಂತ್ರಿಗಳು ಎಂದು ಬರೆಯಲಾಗಿದೆ. ಇದು ಎಲ್ಲಡೆ ವೈರಲ್ ಆಗಿದೆ. ಈ ಮೂಲಕ ಬಿಜೆಪಿಯಲ್ಲೂ ಸಿಎಂ ರೇಸಿನಲ್ಲಿ ಹಲವರಿದ್ದಾರೆ ಅನ್ನೋ ಮಾತಿಗೆ ಇಂಬು ನೀಡಿದೆ.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಎಲ್ಲ ಪಕ್ಷಗಳ ನಾಯಕರು ಹೇಳುತ್ತಿದ್ದರೂ, ಆಗಾಗ ಈ ರೀತಿಯ ರಾಜಕೀಯದಾಟದ ಮೂಲಕ ಮುಖ್ಯಮಂತ್ರಿಗಳ ರೇಸಿನಲ್ಲಿ ನಾನು ಇದ್ದೇನೆ ಅನ್ನೋದನ್ನು ಬಹಿರಂಗ ಪಡಿಸುವುದಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬ್ಯಾನರ್ ಪಾಲಿಟಿಕ್ಸ್ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ ಅನ್ನೋ ಕುತೂಹಲವಿದೆ.