ಪ್ರಜಾಸ್ತ್ರ ಸುದ್ದಿ
ಮುಧೋಳ: ರೈತ ಮುಖಂಡ, ಜನಸಾಮಾನ್ಯರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಲ್ಲಪ್ಪ ಹೆಗಡೆ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ, ಮಾಜಿ ಸಚಿವ ಮುರುಗೇಶ್ ನಿರಾಣಿ, ಅವರ ಸಹೋದರ ಸಂಗಮೇಶ್ ನಿರಾಣಿ ಹಾಗೂ ಇತರೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ.
ಹಲ್ಲೆಗೊಳಗಾದ ಯಲ್ಲಪ್ಪ ಹೆಗಡೆ, ಹನುಮಂತ ಶಿಂಧೆ ಎಂಬುವರು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮುರುಗೇಶ್ ನಿರಾಣಿ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿ 5 ಕೋಟಿ ಪರಿಹಾರ ಕೇಳಿದ್ದರು. ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಅವರ ಚಿಕಿತ್ಸೆಗಾಗಿ ಬೀಳಗಿಯಲ್ಲಿ ಭಿಕ್ಷಾಟನೆ ಅಭಿಯಾನ ನಡೆಸಿದ್ದೆ. ಮಂಕಿ ಕ್ಯಾಪ್ ಹಾಕಿಕೊಂಡು ಬಂದ ಐವರು ನಿರಾಣಿ ವಿರುದ್ಧ ಪ್ರತಿಭಟನೆ ಮಾಡುತ್ತೀಯಾ ಎಂದು ಹೇಳಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಯಲ್ಲಪ್ಪ ಹೆಗಡೆ ಆರೋಪಿಸಿದ್ದಾರೆ.