ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬಜೆಟ್ ಮಂಡನೆಯಾದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಸದನದ ಹೊರಗೂ, ಒಳಗೂ ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರಿಂದ ಅಪಮಾನಕ್ಕೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಶೇಷ ವ್ಯಕ್ತಿ ವಿಪಕ್ಷ ನಾಯಕರಾಗುತ್ತಾರೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿದೆ. ಆದರೆ, ವಿಶೇಷ ವ್ಯಕ್ತಿ ಆಯ್ಕೆಯಾಗುತ್ತಾರೆ ಕಾದು ನೋಡಿ ಅಂತಾ ಹೇಳಿದರು. ಅಲ್ಲದೆ ತಮಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಲೋಕಸಭೆ ಸ್ಪರ್ಧೆಗಿಂತ ಮತ್ತೊಮ್ಮೆ ವಿಧಾನಸಭೆಗೆ ಸ್ಪರ್ಧಿಸುತ್ತೇನೆ. ಇನ್ನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ. ಪಕ್ಷದ ನಾಯಕರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಯತ್ನಾಳ, ಶಾಸಕರಾದ ಆರ್.ಅಶೋಕ್, ಸುರೇಶ್ ಕುಮಾರ್, ಅರವಿಂದ ಬೆಲ್ಲದ್ ಹೆಸರು ವಿಪಕ್ಷ ನಾಯಕನ ಪಟ್ಟಿಯಲ್ಲಿ ಹರಿದಾಡುತ್ತಿವೆ. ಇವರಲ್ಲಿ ಯಾರಾದರೂ ಆಗುತ್ತಾರಾ ಅಥವ ಇವರ ಬಿಟ್ಟು ಬೇರೆಯವರಿಗೆ ಅವಕಾಶ ಸಿಗುತ್ತಾ ಅನ್ನೋದಕ್ಕೆ ಇನ್ನು ಎಷ್ಟು ದಿನ ಕಾಯಬೇಕು ಅಂತಿದ್ದಾರೆ ಬಿಜೆಪಿ ಕಾರ್ಯಕರ್ತರು.