ನವದೆಹಲಿ: ಕಳೆದ 8 ವರ್ಷಗಳ ಹಿಂದೆ ಇಡೀ ದೇಶವನ್ನ ಬೆಚ್ಚಿ ಬೀಳಿಸಿದ್ದ ದೆಹಲಿ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇಂದು ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳಿಗೆ ಕೊನೆಗೂ ನೇಣು ಕುಣಿಕೆ ಬಿದ್ದಿದೆ.
32 ವರ್ಷದ ಮುಖೇಶ ಸಿಂಗ್, 25 ವರ್ಷದ ಪವನ ಗುಪ್ತಾ, 26 ವರ್ಷದ ವಿನಯ ಶರ್ಮಾ ಹಾಗೂ 31 ವರ್ಷದ ಅಕ್ಷಯಕುಮಾರ ಸಿಂಗ್ ಎಂಬ ನಾಲ್ವರು ಅಪರಾಧಿಗಳನ್ನ ಗಲ್ಲಿಗೆ ಏರಿಸಲಾಗಿದೆ. ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳಿಗೆ ಒಟ್ಟಿಗೆ ಗಲ್ಲಿಗೆ ಏರಿಸಲಾಗಿದೆ. ಈ ಮೂಲಕ ಇಷ್ಟು ವರ್ಷಗಳಿಂದ ನಿರ್ಭಯಾ ಹೆತ್ತವರು ಎದುರು ನೋಡ್ತಿದ್ದ ಕ್ಷಣ ಅಂತ್ಯಗೊಂಡಿದೆ.
2012 ಡಿಸೆಂಬರ್ 13ರಂದು ಚಲಿಸ್ತಿದ್ದ ಬಸ್ ನಲ್ಲಿ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಆಕೆ ಮೇಲೆ ಮಾರಣಂತಿಕ ಹಲ್ಲೆ ಸಹ ನಡೆದಿತ್ತು. ಈ ಘಟನೆ ನಡೆದು 13 ದಿನಗಳ ಬಳಿಕ ಯುವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಕೇಸ್ ನಲ್ಲಿ ಅಪ್ರಾಪ್ತ ಸೇರಿ 6 ಜನರನ್ನ ಬಂಧಿಸಲಾಗಿತ್ತು. 2013 ಮಾರ್ಚ್ 11 ರಂದು ತಿಹಾರ್ ಜೈಲಿನಲ್ಲಿ ರಾಮ ಸಿಂಗ್ ಅನ್ನೋ ಅಪರಾಧಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿಗೆ ಮೂರು ವರ್ಷ ಶಿಕ್ಷೆ ನೀಡಿ ಬಿಡುಗಡೆ ಮಾಡಲಾಗಿತ್ತು.
ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ನೀಡಿದ್ದು, ಇಡೀ ದೇಶದ ಜನ ಖುಷಿಯನ್ನ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳಿಂದ ಕಾಯ್ತಿದ್ದ ಕ್ಷಣ ಕೊನೆಗೂ ಬಂತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಹೆತ್ತವರಿಗೆ ಸಾಕಷ್ಟು ಖುಷಿಯಾಗಿದೆ.