ಬರಹ, ಕಾವ್ಯ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯುವ ಬರಹಗಾರರ ಹೊಸ ಕೃತಿಗಳ ಕಿರು ಮಾಹಿತಿ ಪ್ರಜಾಸ್ತ್ರ ‘ಬುಕ್ ಸ್ಟೋರ್’ನಲ್ಲಿ..
ಕವಿ ಸತ್ಯಮಂಗಲ ಮಹಾದೇವ ಅವರು ತುಮಕೂರು ಜಿಲ್ಲೆಯ ಸತ್ಯಮಂಗಲ ಗ್ರಾಮದವರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸ್ತಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿಯೇ ಹೋರಾಟ, ಚಳವಳಿಗಳಲ್ಲಿ ತೊಡಗಿಸಿಕೊಂಡವರು. ಕಾವ್ಯದ ಒಲವು ಹೊಂದಿರುವ ಕವಿ ಸತ್ಯಮಂಗಲ ಮಹಾದೇವ, ಸಿದ್ದಲಿಂಗಯ್ಯ, ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ನಟರಾಜ ಹುಳಿಯಾರ್, ಕಿ.ರಂ ನಾಗರಾಜ ಅವರ ಗರಡಿಯಲ್ಲಿ ಬೆಳೆದವರು.
ಜೀವಪ್ರೀತಿಯ ಕಾಳಜಿಯನ್ನ ಹೊಂದಿರುವ ಕವಿ ಹೊಸತಲೆಮಾರಿನ ಸೂಕ್ಷ್ಮ ಸಂವೇದನೆಯನ್ನ ಹೊಂದಿದ್ದಾರೆ. ‘ಭಾವತೀರದ ಹಾದಿಯಲ್ಲಿ’, ‘ಹೆಜ್ಜೆಮೂಡಿದಮೇಲೆ’ ಹಾಗೂ ‘ಯಾರಹಂಗಿಲ್ಲ ಬೀಸುವಗಾಳಿಗೆ’ ಅನ್ನೋ ಮೂರು ಕವನ ಸಂಕಲನಗಳನ್ನ ಹೊರ ತಂದಿದ್ದಾರೆ. ‘ಯಾರಹಂಗಿಲ್ಲ ಬೀಸುವಗಾಳಿಗೆ’ ಅನ್ನೋ ಕೃತಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ 7 ಪ್ರಶಸ್ತಿಗಳನ್ನ ಪಡೆದಿದೆ.
ಸತ್ಯಮಂಗಲ ಮಹಾದೇವ ಅವರ ಕೃತಿಗಳಿಗೆ ದ.ರಾ ಬೇಂದ್ರೆ ಸ್ಮೃತಿ ಪ್ರಶಸ್ತಿ, ಸಂಚಯ ಸಾಹಿತ್ಯ ಪ್ರಶಸ್ತಿ, ಡಾ.ಶ್ಯಾಮಸುಂದರ ಕ್ಯಾವ್ಯ ಪ್ರಶಸ್ತಿ, ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ, ಡಾ.ಜಿ.ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಕಾವ್ಯ ಪ್ರಶಸ್ತಿಗಳನ್ನ ಪಡೆದುಕೊಂಡಿವೆ. ರಾಜ್ಯ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಕವಿತೆ ವಾಚನ ಮಾಡಿದ್ದಾರೆ.
‘ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ: ತೌಲನಿಕ ಅಧ್ಯಯನ’ ಎಂಬ ವಿಷಯದ ಮೇಲೆ ಪಿ.ಎಚ್ ಡಿ ಪಡೆದಿರುವ ಶ್ರೀಯುತರ ‘ಪಂಚವರ್ಣದ ಹಂಸ’ ಮತ್ತು ಗಾಳಿಗಂಧ ಕೃತಿಗಳು ನವೆಂಬರ್ 4ರಂದು ಲೋಕಾರ್ಪಣೆಗೊಳ್ಳುತ್ತಿವೆ.