ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಸಂಬಂಧ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ಅವರ ಮೇಲೆ ಯುಪಿ ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಯುವತಿಯ ಪರವಾಗಿ ಹಾಗೂ ಪ್ರಕರಣ ಖಂಡಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ ಗಾಂಧಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರ ಮೇಲೆ ಯುಪಿ ಪೊಲೀಸರು ದೌರ್ಜನ್ಯವೆಸಗಿ ಬಂಧಿಸಿರುವುದು ತೀವ್ರ ಖಂಡನೀಯ. ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿ ಅಂಥವರಿಗೆ ರಕ್ಷಣೆ ಇಲ್ಲ ಅಂದ್ರೆ, ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಇಬ್ಬರು ನಾಯಕರ ಮೇಲಿನ ದೌರ್ಜನ್ಯಕ್ಕೆ ಯೋಗಿ ಆದಿತ್ಯನಾಥ ಬೆಲೆ ತೆರಬೇಕಾಗುತ್ತೆ. ಸಂತ್ರಸ್ಥೆಯ ಕುಟುಂಬಸ್ಥರನ್ನ ಗೃಹ ಬಂಧನದಲ್ಲಿಟ್ಟಿದ್ದು, ಎಲ್ಲಿ ಅವರ ಬಣ್ಣ ಬಯಲಾಗುತ್ತೋ ಅನ್ನೋ ಕಾರಣಕ್ಕೆ ಅವರ ಭೇಟಿಗೆ ಅವಕಾಶ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ ಗಾಂಧಿಯೊಂದಿಗೆ ಪೊಲೀಸರ ವರ್ತನೆಗೆ ದೇಶ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ.