ವಿಜಯಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ತುಂಬಾ ಉತ್ತಮ ಮಳೆಯಾಗ್ತಿದ್ದು, ಜನರಲ್ಲಿ ಸಂತಸ ಮೂಡಿದೆ. ಬರಗಾಲದಿಂದ ಹೈರಾಣಾಗಿ ಹೋಗಿರುವ ಜಿಲ್ಲೆಯ ಜನತೆಗೆ ಮುಂಗಾರು ಮಳೆ ಒಂದಿಷ್ಟು ತಂಪು ನೀಡ್ತಿದೆ.
ಜೂನ್ ನಲ್ಲಿ ಮಳೆಗಾಲ ಶುರುವಾಗಿದ್ರೂ ಸರಿಯಾಗಿ ಮಳೆ ಬಾರದ ಕಾರಣ ರೈತರು ಕಂಗಾಲಾಗಿದ್ರು. ಒಮ್ಮೆ ಬಂದ್ರೆ ವಾರಪೂರ್ತಿ ಮಳೆಯ ದರ್ಶನ ಇರ್ತಿರಲಿಲ್ಲ. ಹೀಗಾಗಿ ಪ್ರತಿಯೊಬ್ಬರು ಮುಂದೇನು ಅನ್ನೋ ಚಿಂತೆಯಲ್ಲಿದ್ರು.
ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗ್ತಿದೆ. ಭಾರಿ ಪ್ರಮಾಣದಲ್ಲಿ ಇಲ್ಲದಿದ್ರೂ ಒಂದು ಹಂತದಲ್ಲಿ ಮಳೆ ಬರ್ತಿದ್ದು ಕೃಷಿ ಚಟುವಟಿಕೆ ನಡೆಸಲು ಒಂದಿಷ್ಟು ಅನುಕೂಲವಾಗಿದೆ. ಸೂರ್ಯನ ತಾಪ ಅಷ್ಟಾಗಿ ಕಂಡು ಬರ್ತಿಲ್ಲ. ಮೋಡ ಮುಸುಕಿದ ವಾತಾವರಣ ಇರುತ್ತೆ. ಹೀಗಾಗಿ ಜಿಲ್ಲೆಯ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ತಾಲೂಕುಗಳಾದ ದೇವರಹಿಪ್ಪರಗಿ, ಬಸವನಬಾಗೇವಾಡಿ, ಸಿಂದಗಿ, ಇಂಡಿ, ತಾಳಿಕೋಟಿ, ಆಲಮೇಲನಲ್ಲಿ ವರುಣ ಕಾಣಿಸಿಕೊಳ್ತಿದ್ದಾನೆ. ನಾಗರಪಂಚಮಿಗೆ ನಾಡಿನ ಜನತೆ ತಯಾರಾಗ್ತಿರುವ ಹೊತ್ತಿನಲ್ಲಿ ಧರೆಯು ತಂಪಾಗ್ತಿರುವುದು ಖುಷಿಯ ವಿಷಯ.
ಹಬ್ಬಕ್ಕೆ ಕಳೆ ಕಟ್ಟಬೇಕು ಅಂದ್ರೆ ಮಳೆಯ ಸಿಂಚನ ಬೇಕು. ಹೀಗಾಗಿ ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾಗುವ ಮೂಲಕ ಈ ಭಾಗದ ನೀರಿನ ಸಮಸ್ಯೆ, ರೈತರ ಬದುಕು ಹಸನಾಗುವಂತೆ ಮಾಡ್ಲಿ ಅನ್ನೋದು ಎಲ್ಲರ ಆಶಯ.