ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯಸಭೆಗೆ ನಾಳೆ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಕೊನೆಯ ಸುತ್ತಿನ ಕಸರತ್ತು ನಡೆಸಿವೆ. ಬಿಜೆಪಿ ಸೋಲಿಸಬೇಕಾದರೆ ಜೆಡಿಎಸ್ ನವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ.
ಕಾಂಗ್ರೆಸ್ 2ನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಗೆ ಬೆಂಬಲಿಸಿ ಎಂದು ಜೆಡಿಎಸ್ ಗೆ ಕೇಳಿಕೊಂಡಿದೆ. ಇತ್ತ ಜೆಡಿಎಸ್ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ. ಹೀಗೆ ಒಬ್ಬರಿಗೊಬ್ಬರು ನೀವು ಬೆಂಬಲಿಸಿ ನೀವು ಬೆಂಬಲಿಸಿ ಎನ್ನುತ್ತಿದ್ದಾರೆ.
ಜೆಡಿಎಸ್ ನಲ್ಲಿ 32 ಶಾಸಕರಿದ್ದಾರೆ. ಕಾಂಗ್ರೆಸ್ ನಲ್ಲಿ ಹೆಚ್ಚುವರಿ 25 ಮತಗಳಿವೆ. ಹೀಗಾಗಿ 32 ಮತ ಹೊಂದಿರುವ ನಮಗೆ ಕಾಂಗ್ರೆಸ್ ಬೆಂಬಲಿಸಲಿ ಅನ್ನೋದು ಇವರ ವಾದ. ಇಬ್ಬರು ಅಭ್ಯರ್ಥಿಗಳನ್ನು ಬಿಜೆಪಿ ಗೆಲ್ಲಿಸಿಕೊಳ್ಳಲಿದೆ. 3ನೇ ಅಭ್ಯರ್ಥಿ ಸಿರೋಯಾ ಗೆಲ್ಲಿಸಿಕೊಳ್ಳಲು ಹೆಚ್ಚುವರಿ ಮತಗಳು ಬೇಕು. ಕಾಂಗ್ರೆಸ್ ಹೊಂದಿರುವ 69 ಮತಗಳಿಂದ ಒಬ್ಬರನ್ನು ಗೆಲ್ಲಿಸಿಕೊಳ್ಳಬಹುದು. ಅವರ 2ನೇ ಅಭ್ಯರ್ಥಿ ಗೆಲ್ಲಲು ಹೆಚ್ಚುವರಿ ಮತ ಬೇಕು.
ಇನ್ನು ಜೆಡಿಎಸ್ ಅಭ್ಯರ್ಥಿ ಗೆಲ್ಲಲು ಒಂದು ಪಕ್ಷದ ಸಹಾಯ ಖಂಡಿತ ಬೇಕು. ಯಾಕಂದರೆ ಗೆಲುವಿಗೆ ಪ್ರತಿಯೊಬ್ಬರಿಗೂ 45 ಮತಗಳು ಬೇಕು. ಈ ಕಾರಣಕ್ಕೆ 2ನೇ ಪ್ರಾಶಸ್ತ್ಯದ ಮತಗಳ ವಿನಿಮಯ ಮಾಡಿಕೊಳ್ಳಲು ಪ್ರಸ್ತಾವ ಮುಂದಿದೆ. ಇದೇನಾಗುತ್ತೆ ಅನ್ನೋದು ಗೊತ್ತಿಲ್ಲ. ಇವರಿಬ್ಬರ ನಡುವಿನ ಹಗ್ಗಜಗ್ಗಾಟದ ಲಾಭವನ್ನು ಆಡಳಿತರೂಢ ಬಿಜೆಪಿ ಪಡೆದುಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿದೆ.