ದೇವರಹಿಪ್ಪರಗಿ: ಬಿಬಿ ಇಂಗಳಗಿಯಿಂದ ದೇವರಹಿಪ್ಪರಗಿಗೆ ಹೋಗುವ ರಸ್ತೆ ಇದು. ಸುಮಾರು 26 ಕಿಲೋ ಮೀಟರ್ ರಸ್ತೆ ಹೇಗಿದೆ ಅಂದ್ರೆ, ರೋಡ್ ಮಾಯವಾಗಿ ಬರೀ ತಗ್ಗು, ಗುಂಡಿಗಳ ಮಧ್ಯೆ ವಾಹನಗಳು ಸಂಚಾರಿಸಬೇಕು. ಕೇವಲ 26 ಕಿಲೋ ಮೀಟರ್ ಮಾರ್ಗಕ್ಕೆ ಒಂದು ಗಂಟೆ ಸಮಯ ಹಿಡಿಯುತ್ತೆ ಅಂತಾ ಸ್ಥಳೀಯರು ಹೇಳ್ತಿದ್ದಾರೆ.
ಈ ರಸ್ತೆ ಪರಿಸ್ಥಿತಿ ಹೇಗಿದೆ ಅಂದ್ರೆ, ಬಸ್ ನಲ್ಲಿ ಹೋಗುವವರ ಜೀವಕ್ಕೆ ಗ್ಯಾರೆಂಟಿ ಇಲ್ಲ. ಅಷ್ಟೊಂದು ಹದಗೆಟ್ಟ ರಸ್ತೆಯಿದೆ. ಅಲ್ದೇ, ಈ ಹಿಂದೆ ಬಸ್ ಗಳು ಬಿದ್ದ ಉದಾಹರಣೆಗಳಿವೆ. ಇಲ್ಲಿರುವ ಚಿತ್ರದಲ್ಲಿ ಬಸ್ ಬಿದ್ದಿರುವುದನ್ನ ನೋಡಬಹುದು. ಇಷ್ಟಾದ್ರೂ ಯಾವುದೇ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಕಾರಣ, ಅವರಾಗ್ಲಿ, ಅವರ ಕುಟುಂಬಸ್ಥರಾಗ್ಲಿ ಈ ಮಾರ್ಗ ಮಧ್ಯೆ ಸಂಚಾರ ಮಾಡುವುದಿಲ್ಲವಲ್ಲ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
26 ಕಿಲೋ ಮೀಟರ್ ಮಾರ್ಗ ಮಧ್ಯೆ ಏಳೆಂಟು ಊರುಗಳು ಬರ್ತವೆ. ಶಾಲೆಗೆ ಹೋಗುವ ಮಕ್ಕಳು, ಆಸ್ಪತ್ರೆಗೆ ಹೋಗುವ ಜನರ ಗೋಳು ಹೇಳತೀರದು. ಈ ಹಿಂದೆ ಕೊಂಡಗೂಳಿ ಬಳಿ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಡೋನಿ ಬುದಿಹಾಳ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬಸ್ ದುರಂತದಲ್ಲಿ ಅನೇಕರಿಗೆ ಗಂಭೀರ ಗಾಯಗಳಾಗಿವೆ. ಇದ್ರಿಂದ ರೋಸಿಹೋದ ಕೊಂಡಗೂಳಿ, ಹಂಚಲಿ ಗ್ರಾಮದ ಯುವಕರು ಸೇರಿದಂತೆ ಸುತ್ತಲಿನ ಗ್ರಾಮಗಳ ಸುಮಾರು 2 ಸಾವಿರ ಜನ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ರಸ್ತೆ ದುರಸ್ಥಿಗಾಗಿ ‘ಬೊಗಸೆ ಜೋಳ ಭಿಕ್ಷೆ ಅಭಿಯಾನ’ ನಡೆಸಿದ್ರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಕೆಲಸಗಳು ಆಗ್ಲಿಲ್ಲ. ಅಧಿಕಾರಿಗಳು ನೀಡಿದ ಭರವಸೆ ಇಂದಿಗೂ ಕೈಗೂಡಿಲ್ಲ. ಆದ್ರೆ, ಇದೀಗ 10 ಕಿಲೋ ಮೀಟರ್ ರಸ್ತೆ ಕಾಮಗಾರಿ ಆಗಿದೆ ಅಂತಾ ಅಧಿಕಾರಿಗಳು ಹೇಳ್ತಿದ್ದಾರೆ. ಆದಷ್ಟು ಬೇಗ ಬಿಬಿ ಇಂಗಳಗಿ-ದೇವರಹಿಪ್ಪರಗಿ ಮಾರ್ಗದ ರಸ್ತೆ ದುರಸ್ಥಿ ಮಾಡದೇ ಹೋದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.