ಸಿಂದಗಿಯಲ್ಲಿ ಸುಸಜ್ಜಿತ ರಸ್ತೆ ಮಾಯ, ಪ್ಲೀಸ್ ಹುಡುಕಿ ಕೊಡಿ..

434

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಸ್ವಲ್ಪ ಮಳೆಯಾದ್ರೂ ರಸ್ತೆಯಲ್ಲಿ ಎಲ್ಲಿ ನೋಡಿದ್ರ ನೀರು ತುಂಬಿಕೊಂಡು ನಿಂತು ಬಿಡುತ್ತೆ. ಕೆಸರಿನ ನಡುವೆ ಜನರ ಸಂಚಾರ. ಈ ಬಗ್ಗೆ ಗಮನ ಹರಿಸಬೇಕಾದ ಪುರಸಭೆ ಮೀನಾಮೇಷ ಎಣಿಸುತ್ತಿದೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಪಟ್ಟಣದ ವಿವೇಕಾನಂದ ಸರ್ಕಲ್ ನಿಂದ ಟಿಪ್ಪು ಸುಲ್ತಾನ್ ಸರ್ಕಲ್ ವರೆಗೂ ಇರುವ ರಸ್ತೆ ಸದಾ ಗಿಜಿಗಿಜಿ ಅನ್ನುತ್ತೆ. ಸದಾ ವ್ಯಾಪಾರದಿಂದ ಕೂಡಿರುವ ರಸ್ತೆ ಜನರಿಂದ ತುಂಬಿ ತುಳುಕುತ್ತೆ. ಹಳ್ಳಿಯಿಂದ ಬರುವ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಬಹುತೇಕ ಈ ಮಾರ್ಗದಿಂದ ಹೋಗ್ತಾರೆ. ಆದ್ರೆ, ಈ ರಸ್ತೆಯಲ್ಲಿ ಎಲ್ಲಿ ನೋಡಿದ್ರೂ ತುಗ್ಗು ಗುಂಡಿಗಳು, ಬರೀ ಕೆಸರು. ಹೀಗಾಗಿ ವಾಹನ ಸವಾರರು ಪಡಬಾರದ ಪಾಡು ಪಡ್ತಿದ್ದಾರೆ.

ಹಳೆ ಬಜಾರ್ ರಸ್ತೆ, ಕನಕದಾಸ ಸರ್ಕಲ್ ರೋಡ್, ಗೋಲಗೇರೆ ನಾಕಾದಿಂದ ಸಂಗೊಳ್ಳಿ ರಾಯಣ್ಣ ರೋಡ್ ಸಂಪರ್ಕಿಸುವ ರಸ್ತೆ ಸೇರಿದಂತೆ ಪಟ್ಟಣದ ಬಹುತೇಕ ಕಡೆ ರಸ್ತೆಗಳು ತಗ್ಗು, ಗುಂಡಿಗಳಿಂದ ತುಂಬಿ ತುಳುಕುತ್ತಿವೆ. ಇದ್ರಿಂದಾಗಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸ್ತಿದ್ದಾರೆ.

ಸಣ್ಣಪುಟ್ಟ ಮಳೆಗೆ ರಸ್ತೆಗಳೆಲ್ಲ ಈ ರೀತಿಯಾದ್ರೆ, ಒಂದು ವೇಳೆ ಭಾರಿ ಪ್ರಮಾಣದಲ್ಲಿ ಮಳೆಯಾದ್ರೆ ಜನರ ಪರಿಸ್ಥಿತಿ ಏನು. ವಾಹನ ಸವಾರರ ಪಾಡೇನು. ಅಪಘಾತಗಳು ಸಂಭವಿಸಿ ಅನಾಹುತವಾದ್ರೆ ಯಾರು ಜವಾಬ್ದಾರರು ಅನ್ನೋ ಪ್ರಶ್ನೆ ಮೂಡಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!