ಪ್ರಜಾಸ್ತ್ರ ಸುದ್ದಿ
ಸಿಂದಗಿ: ದೇಶದ ಬೆನ್ನೆಲಬು, ಅನ್ನದಾತ ಅಂತೆಲ್ಲ ಕರೆಯುವ ರೈತರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುವವರು ಇಲ್ಲದೆ ಹೋಗುತ್ತಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆ ಸಾಲಿಗೆ ಪಟ್ಟಣದಿಂದ ಹಳೆ ಬಂಕಲಗಿಗೆ ಹೋಗುವ ರಸ್ತೆಯೂ ಒಂದಾಗಿದೆ.
ಮಳೆಗಾಲ ಬಂದರೆ ಈ ರಸ್ತೆಯಲ್ಲಿ ರೈತರು ಸಂಚಾರ ಮಾಡುವುದೇ ಒಂದು ಸಾಹಸವಾಗುತ್ತೆ. ಉಳಿದ ಸಂದರ್ಭದಲ್ಲಿ ತಗ್ಗು ಗುಂಡಿಗಳಲ್ಲಿ ಧೂಳಿನೊಂದಿಗೆ ಸಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇದರಿಂದ ಹೈರಾಣಾದ ಈ ಭಾಗದ 100ಕ್ಕೂ ಹೆಚ್ಚು ರೈತರು ಕೂಡಿಕೊಂಡು ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ.
ತಾಲೂಕಿನ ಯಾವುದೇ ಜನಪ್ರತಿನಿಧಿಗಳು ಇಲ್ಲಿನ ರಸ್ತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಇದೀಗ ಉಪ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಗೆಲುವು ಸಾಧಿಸಿ ಬರುವ ಅಭ್ಯರ್ಥಿಯಾದರೂ ನಮ್ಮ ಗೋಳು ಕೇಳಬೇಕು. ಒಂದು ವೇಳೆ ಅವರು ಕೆಲಸ ಮಾಡಿದ್ದೇ ಆದಲ್ಲಿ 2023ರ ಚುನಾವಣೆಯಲ್ಲಿ ರೈತರೆಲ್ಲ ಅವರಿಗೆ ಬೆಂಬಲ ನೀಡಲಿದ್ದಾರೆ.
ನಿಂಗಣ್ಣ ಹಿರೇಕುರುಬರ, ರೈತ
ಒಬ್ಬೊಬ್ಬ ರೈತ ಇಂತಿಷ್ಟು ಎಂದು ಹಣ ನೀಡಿದ್ದಾರೆ. ಆ ಹಣದಲ್ಲಿ ಸುಮಾರು 5 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಮೂರು ದಿನಗಳಲ್ಲಿ ನಿರ್ಮಿಸಿಕೊಂಡಿದ್ದಾರೆ. ಲಕ್ಕಪ್ಪ ಪೂಜಾರಿ, ಈರಣ್ಣ ವಿಭೂತಿಹಳ್ಳಿ, ತಾರಾಸಾಬ್ ಗುಂದಗಿ, ನಿಂಗಣ್ಣ ಹಿರೇಕುರಬರ, ಬಸಪ್ಪ ಸುಂಗಠಾಣ, ಮುತ್ತು ಗೋಣಿ, ಅಮೀನಸಾಬ್ ಅವಟಿ, ಮುದಕಪ್ಪ ಹಿಂಚಗೇರಿ, ಪದಮಪ್ಪ ಹಿರೇಕುರಬರ, ಅಯ್ಯಪ್ಪ ಬಂಕಲಗಿ, ಬಾಪೂಗೌಡ ಬಿರಾದಾರ, ರಾಜು ರಜಪೂತ, ಸೋಮಣ್ಣ ವಿಭೂತಿಹಳ್ಳಿ, ಯಮನಪ್ಪ ವಿಭೂತಿಹಳ್ಳಿ, ಅಮೋಘಿ ಹೆಸನೂರ, ಮುದಕಪ್ಪ ಹಿರೇಕುರಬರ ಸೇರಿದಂತೆ 100ಕ್ಕೂ ಅಧಿಕ ರೈತರು ಹಣ ನೀಡಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಈಗ್ಲಾದರೂ ಸಂಬಂಧಿಸಿದ ಅಧಿಕಾರಿಗಳು ತಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂದಿದ್ದಾರೆ.