ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ತನ್ನೂರಿಗೆ ರಸ್ತೆ ಆಗುವ ತನಕ ಮದುವೆ ಆಗುವುದಿಲ್ಲವೆಂದು ಪಣತೊಟ್ಟಿದ್ದ ಯುವತಿಯ ಮನವಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಂದಿಸಿದ್ದಾರೆ. ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಹತ್ತಿರದ ಎಂ.ರಾಂಪೂರ ಗ್ರಾಮಕ್ಕೆ ಸರಿಯಾದ ರಸ್ತೆಯೇ ಇಲ್ಲ. ಹೀಗಾಗಿ ಸ್ನಾತಕೋತ್ತರ ಪದವಿಧರೆಯಾದ ಆರ್.ಡಿ ಬಿಂದು ಅನ್ನೋ ಯುವತಿ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದ್ರೆ, ಕೆಲಸ ಮಾತ್ರ ಆಗಿರಲಿಲ್ಲ.
ಊರಿನ ರಸ್ತೆ ಸಮಸ್ಯೆಯಿಂದಾಗಿ ಅದೆಷ್ಟೋ ಮದುವೆಗಳು ನಡೆಯದೆ ಹೋಗಿವೆ ಎಂದು ಬಿಂದು ನೋವು ತೋಡಿಕೊಳ್ಳುತ್ತಾರೆ. ಈ ಕಾರಣಕ್ಕೆ ತನ್ನೂರಿಗೆ ರಸ್ತೆಯಾಗುವ ತನಕ ತಾನು ಮದುವೆಯಾಗುವುದಿಲ್ಲವೆಂದು ನಿರ್ಧರಿಸಿದ್ದರು. ಕೆಲ ದಿನಗಳ ಹಿಂದೆ ಸಿಎಂಗೆ ಮೇಲ್ ಮೂಲಕ ಮನವಿ ಸಲ್ಲಿಸಿದ್ದರು. ಅದಕ್ಕೆ ಸಿಎಂ ಸ್ಪಂದಿಸಿದ್ದು, ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸಿಎಂ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಮೂಲ ಸೌಕರ್ಯಗಳ ಹೆಸರಿನಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುತ್ತದ್ದರೂ ಇಂದಿಗೂ ಅದೆಷ್ಟೋ ಗ್ರಾಮಗಳಿಗೆ ರಸ್ತೆ, ನೀರು, ವಿದ್ಯುತ್, ಆಸ್ಪತ್ರೆ, ಶಾಲೆ ಇಲ್ಲದಿರುವುದು ನಿಜಕ್ಕೂ ದುರಂತವೇ ಸರಿ.