ಬೆಂಗಳೂರು/ವಿಜಯಪುರ: ಕೇಂದ್ರದಿಂದ ಪ್ರವಾಹ ಪರಿಹಾರ ವಿಳಂಬವಾಗ್ತಿರುವುದಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯದ ಜನರ ಬಳಿ ಕ್ಷಮೆ ಕೇಳಿದ್ದಾರೆ. ಸವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನ ತಮ್ಮ ವಸತಿಗೃಹದಲ್ಲಿ ಮಾತ್ನಾಡಿದ ಅವರು ರಾಜ್ಯದ ಜನರ ಕ್ಷಮೆ ಕೋರಿದ್ದಾರೆ.
ಕೇಂದ್ರದಿಂದ ಪರಿಹಾರ ಬರುವುದು ತಡವಾಗಿದೆ. ಇದನ್ನ ಒಪ್ಪಲೇಬೇಕು. ಆದ್ರೆ, ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕೇಂದ್ರದಿಂದ ಪರಿಹಾರ ತಂದು ಸಮಸ್ಯೆ ಬಗೆ ಹರಿಸುವುದು ನಮ್ಮ ಗುರಿ ಅಂತಾ ಹೇಳಿದ್ದಾರೆ.
ಇತ್ತ ಕೇಂದ್ರ ಸಚಿವ ಸದಾನಂದಗೌಡ ಅವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ರು. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ತೋರಿಸಿದ ಚಕ್ರವರ್ತಿ ಸೂಲಿಬೆಲೆ ಅವರಿಗೆ ಬೈಯುವುದ್ರಿಂದ ಯಾವುದೇ ಲಾಭವಿಲ್ಲ. ನೀವು ಕೇಂದ್ರ ಸಚಿವರಿದ್ದೀರಿ. 10 ಸಾವಿರ ಕೋಟಿ ರೂಪಾಯಿ ಪರಿಹಾರ ತನ್ನಿ ಎಂದು ವಾಗ್ದಾಳಿ ನಡೆಸಿದ್ರು.
ಸೂಲಿಬೆಲೆ ವಿಧಾನಸಭೆ ಅಥವ ಪರಿಷತ್ ಸದಸ್ಯರಲ್ಲ. ಅವರನ್ನ ಬೈಯುವುದ್ರಿಂದ ನಮ್ಮ ಪಕ್ಷಕ್ಕೆ ಹಾನಿಯೆಂದು ಎಂದಿರುವ ಯತ್ನಾಳ, ಬೆಂಗಳೂರಲ್ಲೋ, ಹುಬ್ಬಳ್ಳಿಯಲ್ಲೋ ಕುಳಿತು ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿದ್ರೆ ಅರ್ಥವಿಲ್ಲ. ಪ್ರಧಾನಿ ಬಳಿ ಹೋಗಿ ಪರಿಹಾರ ತನ್ನಿ ಅಂತಾ ಹೇಳಿದ್ದಾರೆ.