ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಗೊಂದು ಸ್ವತಂತ್ರವಾದ ಫಿಲ್ಮ್ ಸಿಟಿ ಆಗಬೇಕು ಅನ್ನೋದು ಬಹುದಿನಗಳ ಕನಸು. ನಟ, ನಿರ್ದೇಶಕ ಶಂಕರನಾಗ್ ಅವರಿಂದ ಎಲ್ಲರೂ ಈ ಕನಸು ಕಂಡಿದ್ರು. ಇದೀಗ ಅದು ಹೆಸರಘಟ್ಟದಲ್ಲಿ ನಿರ್ಮಾಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೈಸೂರು ಎನ್ನಲಾಯ್ತು. ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಮನಗರ, ಬಳಿಕ ಕನಕಪುರ ರಸ್ತೆಯ ರೋರಿಚ್ ಎಸ್ಟೇಟ್ ಎಂದು ಜಾಗ ಬದಲಾಗುತ್ತಲೇ ಬಂದಿದೆ. ಇದೀಗ ಕೊನೆಯದಾಗಿ ಬೆಂಗಳೂರಿನ ಹೊರವಲಯದ ಹೆಸರಘಟ್ಟದಲ್ಲಿ ನಿರ್ಮಿಸಲು ಬಿಎಸ್ವೈ ಸರ್ಕಾರ ತಯಾರಿ ನಡೆಸಿದೆ.
ಚಿತ್ರರಂಗದ ಚೇತರಿಕೆ ಸಂಬಂಧ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ಡಿಸಿಎಂ ಅಶ್ವಥನಾರಾಯಣ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಫಿಲ್ಮ್ ಸಿಟಿ ವಿಚಾರ ಪ್ರಸ್ತಾಪವಾಗಿದ್ದು, ಹೆಸರಘಟ್ಟದಲ್ಲಿ ಪಶುಸಂಗೋಪನೆ ಇಲಾಖೆಯ 450 ಎಕರೆ ಜಾಗವಿದೆ. ಇದರಲ್ಲಿ 150 ಎಕರೆ ನೀಡುವಂತೆ ಒತ್ತಾಯವಿದ್ದು, ಈ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದು ಡಿಸಿಎಂ ತಿಳಿಸಿದ್ದಾರೆ.