ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ನಾಡಿನ ಖ್ಯಾತ ಹಿರಿಯ ಸಾಹಿತಿ, ಚಿಂತಕ, ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಈ ಸಾಲಿನ ಡಾ.ಶಿಮುಶ ಪ್ರಶಸ್ತಿ ಲಭಿಸಿದೆ. ಹಾವೇರಿಯ ಹೊಸಮಠ ಬಸವಕೇಂದ್ರದಿಂದ ನೀಡುವ ಡಾ.ಶಿಮುಶ ಪ್ರಶಸ್ತಿಗೆ ಮಲ್ಲೇಪುರಂ ಅವರು ಆಯ್ಕೆಯಾಗಿದ್ದಾರೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಡಿಸೆಂಬರ್ 20ರಂದು ಹಾವೇರಿಯಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಶಸ್ತಿ 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನ ಹೊಂದಿದೆ.
ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರು ಮೂಲತಃ ಬೆಂಗಳೂರಿನವರು. ಕನಕಪುರದಲ್ಲಿ ಶಿಕ್ಷಕ ವೃತ್ತಿಜೀವನ ಶುರು ಮಾಡಿದ್ರು. ತಮ್ಮ ಸಾಹಿತ್ಯ, ಚಿಂತನೆ, ಸಂಸ್ಕೃತದ ಮೇಲಿನ ಪಾಂಡಿತ್ಯದಿಂದಾಗಿ ಹಂತ ಹಂತವಾಗಿ ಉನ್ನತ ಸ್ಥಾನಕ್ಕೆ ಏರಿದ್ರು. 1998ರಲ್ಲಿ ಹಂಪಿ ಕನ್ನಡ ವಿವಿ ಕುಲಸಚಿವರಾಗಿ ಸೇವೆ ಸಲ್ಲಿಸಿದ್ರು. ಮುಂದೆ 2004ರಲ್ಲಿ ಇಲ್ಲಿಯೇ ಡೀನ್ ಹಾಗೂ ಪ್ರಸಾರರಂಗದ ನಿರ್ದೇಶಕರಾದ್ರು.
ಇಷ್ಟು ಮಾತ್ರವಲ್ಲದೇ ನಾಡಿನ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಸ್ಕೃತ, ಭಾಷೆ, ಸಾಧು ಸಂತರು ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿದ್ದಾರೆ. ಇದಲ್ಲದೇ ಅಂಕಣಕಾರರಾಗಿಯೂ ತಮ್ಮ ಬರವಣಿಗೆಯ ಮೂಲಕ ಅಕ್ಷರ ಲೋಕಕ್ಕೆ ಅನನ್ಯ ಕೊಡುಗೆ ನೀಡುತ್ತಾ ಬರ್ತಿದ್ದಾರೆ.