ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸಿಂದಗಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಿ ಏಕಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೀಗಾಗಿ ನಾವೆಲ್ಲ ನಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಕಸಾಪ ತಾಲೂಕು ಮಾಜಿ ಅಧ್ಯಕ್ಷ ರಾಜಶೇಖರ ಕೂಚಬಾಳ ತಿಳಿಸಿದ್ದಾರೆ.
ಬುಧವಾರ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ವಿಚಾರದಿಂದ ಹಿಡಿದು ಯಾವುದೇ ಚುಟುವಟಿಕೆಗಳಿಗೆ ಸಮಿತಿಗಳನ್ನು ರಚಿಸಿಲ್ಲ. ಈಗ ಆಯ್ಕೆ ಮಾಡಿರುವ ರಾ.ಶಿ ವಾಡೇದ ಅವರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಇವರಗಿಂತ ಹಿರಿಯರಿದ್ದರು. ಇವರಿಗೆ ಇನ್ನು ಅವಕಾಶ ಇತ್ತು. ಸಿಂದಗಿ ತಾಲೂಕಿನ ಜನತೆಗೆ ಹೆಚ್ಚಿನ ಅವಕಾಶ ನೀಡಿಲ್ಲ. ಯಾರನ್ನೂ ಸರಿಯಾಗಿ ಪರಿಗಣಿಸದೆ ಅವರೆ ಮಾಡಿಕೊಂಡಿದ್ದಾರೆ. ಅವರೆ ಮಾಡಿಕೊಳ್ಳಿ ಎಂದರು.
ಸಮ್ಮೇಳನ ವಿಚಾರವಾಗಿ ಆರಂಭದಿಂದ ಗೊಂದಲ, ವಿವಾದ ಹಾಗೂ ಹಣಕಾಸಿನ ವಿಚಾರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನೊಳಗಿನ ವ್ಯವಸ್ಥೆಯ ಬಗ್ಗೆ ಬೇಸರವಿದೆ. ಬದಲಾವಣೆಯಾಗುತ್ತೆ ಎಂದು ಕಾದು ನೋಡಿದೆವು. ಆಗಲಿಲ್ಲ. ಜನರಿಗೆ ಕೆಟ್ಟ ಸಂದೇಶ ಹೋಗಿರುವುದಕ್ಕೆ ವಿಷಾದವಿದೆ. ಸಾಹಿತ್ಯ, ಪರಿಷತ್, ಸಮ್ಮೇಳನ ನಿರಂತರವಾಗಿ ನಡೆಯುತ್ತಿರುತ್ತೆ. ಆದರೆ, ಪರಷತ್ತಿನೊಳಗಿನ ಬೆಳವಣಿಗೆಯಿಂದ ನಾವು ರಾಜೀನಾಮೆ ಸಲ್ಲಿಸಿದ್ದೇವೆ ಅಂತಾ ತಿಳಿಸಿದರು. ಈ ವೇಳೆ ಶಿವಾನಂದ ಕಲ್ಲೂರ, ಭೀಮಣ್ಣಗೌಡ ಹೆರೂರು ಉಪಸ್ಥಿತರಿದ್ದರು.