ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಬಿಸಿಲಿನ ತಾಪ ಕಡಿಮೆಯಾಗಿಲ್ಲ. ಜೂನ್ ತಿಂಗಳು ಶುರುವಾಗ್ತಿದ್ರೂ ಬಿಸಿಲು ಅನ್ನೋದು ಇಲ್ಲಿನ ಜೀವಗಳನ್ನ ಹಿಂಡಿಹಿಪ್ಪೆ ಮಾಡ್ತಿದೆ. ಇದರ ನಡುವೆ ಮೇ 29ರಿಂದ ಸರ್ಕಾರಿ ಶಾಲೆಗಳು ಶುರುವಾಗಿವೆ. ಆದ್ರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಇನ್ನೂ ಕಡಿಮೆಯಾಗಿಲ್ಲ.
ಕೆಂಡದಂತ ಬಿಸಿಲಿನಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ, ಕಲಬುರಗಿ ಹಾಗೂ ಯಾದಗಿರಿಯ ಸರ್ಕಾರಿ ಶಾಲೆಗಳಿಗೆ 15 ದಿನಗಳ ಕಾಲ ರಜೆ ಘೋಷಿಸಲಾಗಿದೆ. ರಾಯಚೂರಿನಲ್ಲಿ ಜೂನ್ 5ರ ತನಕ ರಜೆ ಘೋಷಣೆ ಮಾಡಲಾಗಿದೆ. ಕೆಲವು ಜಿಲ್ಲೆಗಳಿಗೆ ಆಯಾ ಭಾಗದ ಮನವಿ ಮೆರೆಗೆ ಜಿಲ್ಲಾಧಿಕಾರಿಗಳು ರಜೆ ವಿಸ್ತರಣೆ ಮಾಡಿದ್ದಾರೆ. ಆದ್ರೆ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ.
ಬಿಸಿಲಿನಿಂದ ಈ ಭಾಗದ ಮಕ್ಕಳು ಶಾಲೆಗೆ ಹೋಗುವುದು, ಅಲ್ಲಿ ಆಟ ಆಡುವುದು ಸೇರಿದಂತೆ ಶೈಕ್ಷಣಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಬಳ್ಳಾರಿ ಡಿಡಿಪಿಐ ಶ್ರೀಧರನ್ ಅವರ ಗಮನಕ್ಕೆ ತರಲಾಗಿದೆ. ಭಾನುವಾರ ಹಾಗೂ ರಂಜಾನ್ ರಜೆ ದಿನಗಳಿರುವುದ್ರಿಂದ ಇದರ ಬಗ್ಗೆ ಡಿಸಿ ಜೊತೆ ಮಾತ್ನಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಬರಗಾಲ, ಕೆಂಡದಂತ ಬಿಸಿಲು ಅನ್ನೋದು ಶಾಪವಾಗಿದೆ. ಹೀಗಾಗಿ ಜೂನ್ ತಿಂಗಳಲ್ಲಿಯೂ ಬಿಸಿಲಿನ ತಾಪ ಕಡಿಮೆಯಾಗುವುದಿಲ್ಲ. ಹೀಗಾಗಿ ಈ ಭಾಗದ ಸರ್ಕಾರಿ ಕಚೇರಿಗಳ ವೇಳೆಯನ್ನೇ ಬದಲು ಮಾಡಲಾಗುತ್ತಾ ಬರಲಾಗ್ತಿದೆ. ಈ ಬಾರಿ ಅತೀ ಹೆಚ್ಚು ಬಿಸಿಲಿದ್ದು, ಸರ್ಕಾರಿ ಶಾಲೆಗಳಿಗೆ ಇನ್ನು ಕೆಲ ದಿನಗಳ ಕಾಲ ರಜೆ ಘೋಷಣೆ ಮಾಡಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ.