ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡುವ ಸಂಬಂಧ ರಾಜ್ಯಾದ್ಯಂತ ತಳವಾರ ಹಾಗೂ ಪರಿವಾರ ಸಮಾಜದ ವತಿಯಿಂದ ವಿನೂತನ ಹೋರಾಟ, ಚಳವಳಿ, ಪ್ರತಿಭಟನೆ ನಡೆದಿವೆ. ಅದೇ ರೀತಿ ಸಿಂದಗಿಯಲ್ಲಿ ರಕ್ತದಾನ ಮಾಡುವ ಮೂಲಕ ಹೋರಾಟ ಶುರು ಮಾಡಲಾಗಿದೆ.
‘ನಾವು ರಕ್ತ ನೀಡುತ್ತೇವೆ ನೀವು ಜಾತಿ ಪ್ರಮಾಣ ಪತ್ರಗಳನ್ನು ನೀಡಿ’ ಅನ್ನೋ ಘೋಷವಾಕ್ಯದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯ್ತು. ಪಟ್ಟಣದ ಗಾಂಧಿ ವೃತ್ತದಿಂದ ಶುರುವಾದ ಮೆರವಣಿಗೆ ಅಂಬೇಡ್ಕರ್ ಸರ್ಕಲ್, ಅಂಬಿಗೇರ ಚೌಡಯ್ಯ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ಸರ್ಕಲ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿತು. ಈ ವೇಳೆ ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ, ಜೆಡಿಎಸ್ ಯುವ ನಾಯಕ ಅಶೋಕ ಮನಗೂಳಿ, ತಳವಾರ ಮತ್ತು ಪರಿವಾರ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಶ್ರೀಶೈಲ ಬುಯ್ಯಾರ ಸೇರಿದಂತೆ ಅನೇಕರು ಭಾಗವಹಿಸಿದ್ರು.
ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪೂರ್ವನಿಯೋಜನೆಯಂತೆ ರಕ್ತದಾನ ಮಾಡಲಾಯ್ತು. ಈ ವೇಳೆ ಮಾತ್ನಾಡಿದ ಶಾಸಕ ಎಂ.ಸಿ ಮನಗೂಳಿ, ತಳವಾರ ಹಾಗೂ ಪರಿವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರಕ್ಕಾಗಿ ಸಿಎಂ ಮನೆ ಮುಂದೆ ಧರಣಿ ಕುಳಿತುಕೊಳ್ಳೋಣ. ನಾನು ಬರುತ್ತೇನೆ ಎಂದು ಹೇಳಿದ್ರು. ಬಳಿಕ ಮಾಜಿ ಶಾಸಕರಾದ ರಮೇಶ ಭೂಸನೂರ ಸೇರಿ ಪ್ರಮುಖರು ಮಾತ್ನಾಡಿದ್ರು. ನಂತರ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯ್ತು.