ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದ ದೇವಸ್ಥಾನದಲ್ಲಿ ನವೆಂಬರ್ 9ರಂದು ಕಳ್ಳತನ ನಡೆದಿದೆ. ಗ್ರಾಮದ ಲಕ್ಷ್ಮೀ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಶಾಸಕ ಎಂ.ಸಿ ಮನಗೂಳಿ, ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರನ್ನ ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ರು.
ಈ ವೇಳೆ ಲಕ್ಷ್ಮೀ ಭಾಗ್ಯವಂತಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕಂಟೆಪ್ಪಾ ಕಲ್ಲೂರ, ಸಿದ್ದಣ್ಣ ಚೌಧರಿ, ಭಾಗಪ್ಪ ಶಿವಣಗಿ, ಕಾಶಪ್ಪ ಬಡಿಗೇರ, ಶಿವಶಂಕರ ನಾಗಠಾಣ, ನಿಂಗಣ್ಣ ಮಾಗಣಗೇರಿ ಸೇರಿ ಹಲವರು ಹಾಜರಿದ್ರು.
ಘಟನೆ ಹಿನ್ನೆಲೆ
ಸೋಮವಾರ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ನಡುವೆ ಲಕ್ಷ್ಮೀ ಭಾಗ್ಯವಂತಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಗರ್ಭಗುಡಿಯ ಕೀಲಿ ಮುರಿದು, ಬಂಗಾರದ ಬೋರಮಳ, ಬಂಗಾರದ ಗುಂಡು, ಬಂಗಾರದ ತಾಳಿ, ಬಂಗಾರದ ಮೂಗಿನ ನತ್ತು, ಬೆಳ್ಳಿಯ ಲಿಂಗದ ಕಾಯಿ, ಬೆಳ್ಳಿಯ ಕಿರೀಟಗಳು, ಬೆಳ್ಳಿಯ ಡಾಬು, ಬೆಳ್ಳಿಯ ರುಳಿ ಸೇರಿದಂತೆ ಅಂದಾಜು 2 ಲಕ್ಷದ 54 ಸಾವಿರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನ ಕಳ್ಳತನ ಮಾಡಲಾಗಿದೆ.
ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಪಿಐ ಹೆಚ್.ಎಂ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.