ಗದಗ: ಕಳಸಾ-ಬಂಡೂರಿ ನಾಲಾ ಜೋಡಣೆಯಾಗದಿರುವುದನ್ನ ಖಂಡಿಸಿ ನಡೆಸ್ತಿರುವ ಪ್ರತಿಭಟನೆಗೆ ಇಂದು ನಾಲ್ಕು ವರ್ಷ ಪೂರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗದಗ ಬಂದ್ ಗೆ ಕರೆ ನೀಡಲಾಗಿದೆ.
ಜುಲೈ 16ಕ್ಕೆ ನಾಲ್ಕು ವರ್ಷ ಪೂರ್ಣಗೊಂಡು 5ನೇ ವರ್ಷಕ್ಕೆ ಕಾಲಿಡ್ತಿದೆ ರೈತರ ಪ್ರತಿಭಟನೆ. ಹೀಗಾಗಿ ಕಳಸಾ-ಬಂಡೂರಿ ನಾಲಾ ಜೋಡಣೆಯಾಗದಿರುವುದನ್ನ ವಿರೋಧಿಸಿ ಮತ್ತು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕೆಂದು ಒತ್ತಾಯಿಸಿ ಗದಗ ಬಂದ್ ಗೆ ಕರೆ ನೀಡಲಾಗಿದೆ.
ವ್ಯರ್ಥವಾಗಿ ಸಮುದ್ರ ಸೇರ್ತಿರುವ ನೀರನ್ನ ಮಲಪ್ರಭೆಗೆ ಹರಿಸಿ ಅನ್ನೋದು ಹೋರಾಟಗಾರ ರೈತರ ಆಗ್ರಹ. ಈ ಒಂದು ಯೋಜನೆಯಿಂದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಯ ಜನಗಳಿಗೆ ಹಾಗೂ ಕೃಷಿಗೆ ನೀರು ಸಿಗುತ್ತೆ. ಇವರ ಬವಣೆ ಕಡಿಮೆಯಾಗುತ್ತೆ. ಆದ್ರೆ, ಕೆಟ್ಟ ರಾಜಕಾರಣಿಗಳ ಬೇಜಾವಾಬ್ದಾರಿ ನಡೆಯಿಂದ ರೈತರ ಗೋಳು ಕೇಳುವವರಿಲ್ಲದಂತಾಗಿದೆ.
1980ರಲ್ಲಿ ನಡೆದ ನರಗುಂದ ಬಂಡಾಯ ಹೋರಾಟ ರಾಜ್ಯದಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿದೆ. ಆದ್ರೆ, ಜನಪ್ರತಿನಿಧಿಗಳ ಹೊಲಸು, ಕುತಂತ್ರ ರಾಜಕಾರಣಕ್ಕೆ ಈ ಭಾಗದ ಜನರು ಬಲಿಯಾಗ್ತಿದ್ದಾರೆ. ಯಾವ ಮೋದಿ ಆಗ್ಲಿ. ಉತ್ತರ ಕರ್ನಾಟಕ ಭಾಗದ ಪರವಾಗಿ ನಾನಿದ್ದೇನೆ ಅಂತಾ ಹೇಳುವ ಸಿಎಂಗಳಾಗ್ಲಿ ಇದರ ಬಗ್ಗೆ ಕ್ಯಾರೆ ಅಂತಿಲ್ಲ. ರೆಸಾರ್ಟ್ ರಾಜಕಾರಣ ಮಾಡಿಕೊಂಡು ತಮ್ಮ ಮೈ ಕಾಯಿಸಿಕೊಳ್ಳುತ್ತಾ ಮಜಾ ಮಾಡುವ ಇವರಿಗೆ ನೀರಿಲ್ಲದ ಜನರ ಪಾಡು ಹೇಗೆ ತಾನೆ ಅರ್ಥವಾದೀತು.