ಪ್ರಜಾಸ್ತ್ರ ಸುದ್ದಿ
ಗದಗ: ಲೋಕಸಭಾ ಚುನಾವಣೆ ನಿಮಿತ್ತ ಮತದಾನದ ಮಹತ್ವ ಸಾರುವ ಉದ್ದೇಶದಿಂದ ರೋಣ ತಾಲೂಕ ಪಂಚಾಯತ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಅವರ ಮದುವೆ ಸಮಾರಂಭದಲ್ಲಿ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಎಸ್.ಕೆ ಇನಾಮದಾರ ಅವರ ಅಧ್ಯಕ್ಷತೆಯಲ್ಲಿ ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಮಾಡಲಾಯಿತು.
ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ವಿರಪ್ಪ ಹಾಗೂ ಶಿವಪ್ಪ ಸೂಡಿ ಅವರ ಮಕ್ಕಳಾದ ಪ್ರಕಾಶ ಹಾಗು ಪ್ರವೀಣ ಅವರ ಮದುವೆ ನಡೆಯಿತು. ಈ ವೇಳೆ ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕೆಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಧು-ವರ ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಅಮೂಲ್ಯ ಘಳಿಗೆ. ನನ್ನ ಮಗ ತಾಲೂಕ ಪಂಚಾಯತಿಯಲ್ಲಿ ಕೆಲಸ ಮಾಡುವ ಕಾರಣ ಮತದಾನ ಜಾಗೃತಿ ಮಾಡೋಣ ಅಂತಾ ಮನೆಯಲ್ಲಿ ಚರ್ಚೆ ಮಾಡಿದ. ಹಾಗಾಗಿ ನಾವು ಸುಮಾರು 3000ಕ್ಕೂ ಹೆಚ್ಚು ಜನರ ನಡುವೆ ಮತದಾನ ಜಾಗೃತಿ ಕೈಗೊಂಡೆವು ಇದು ನಮ್ಮ ಕುಟುಂಬಕ್ಕೆ ಖುಷಿ ತಂದಿದೆ.
ಶಿವಪ್ಪ ಸೂಡಿ , ವರನ ತಂದೆ
ಈ ವೇಳೆ ಮಾತನಾಡಿದ ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ ಇನಾಮದಾರ, ಮತದಾನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.