ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಿಗುವ ಲಡ್ಡು ತಯಾರಿಕೆಗೆ ಕರ್ನಾಟಕ ನಂದಿನಿ ತುಪ್ಪ ಪೂರೈಕೆ ಆಗುತ್ತಿತ್ತು. ಇನ್ನು ಮುಂದೆ ಪೂರೈಕೆ ಮಾಡಲು ಆಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಇದು ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಈ ವಿಚಾರದ ಕುರಿತು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ನಮ್ಮ ಹೆಮ್ಮೆಯ ನಂದಿನಿಗೆ ಮಾರುಕಟ್ಟೆಯಲ್ಲಿ ತನ್ನದೆಯಾದ ಸ್ಥಾನವಿದೆ. ಉತ್ತಮ ಹೆಸರಿದೆ. ಬೇಡಿಕೆ ಇದೆ. ಟೆಂಡರ್ ಪಡೆಯಬೇಕು ಎನ್ನುವ ಕಾರಣಕ್ಕೆ ಗುಣಮಟ್ಟ ಹಾಗೂ ಬೆಲೆಯಲ್ಲಿ ರಾಜಿಯಾಗುವುದಿಲ್ಲ ಎಂದು ಹೇಳಲಾಗಿದೆ.
ಹೌದು, ತಿರುಪತಿ ತಿರುಮಲ ದೇವಸ್ಥಾಟನ ಟ್ರಸ್ಟ್ ತುಪ್ಪ ಖರೀದಿ ಸಂಬಂಧ ಟೆಂಡರ್ ಕರೆದಿದೆ. 2005ರಿಂದಲೂ ಕೆಎಂಎಫ್ ತುಪ್ಪ ಪೂರೈಕೆ ಮಾಡಿಕೊಂಡು ಬಂದಿದೆ. ಪ್ರತಿ ಕೆಜಿಗೆ 349ರಂತೆ 345 ಟನ್ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಈ ಬಾರಿ ಟಿಟಿಡಿ ಟೆಂಡರ್ ನಲ್ಲಿ ಕೆಎಫ್ ನಿಗದಿ ಮಾಡಿರುವ ದರ 3ನೇ ಸ್ಥಾನದಲ್ಲಿದೆ. ಈ ಕಾರಣಕ್ಕೆ ನಾವು ತುಪ್ಪ ಪೂರೈಕೆ ಮಾಡುತ್ತಿಲ್ಲವೆಂದು ಕೆಎಂಎಫ್ ಅಧ್ಯಕ್ಷ ಹೇಳಿದ್ದಾರೆ. ಆದರೆ, ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ನಾಯಕ ಸಿ.ಟಿ ರವಿ ಹೇಳಿಕೆಗೆ ಕಾಂಗ್ರೆಸ್ ಕಿಡಿ ಕಾರಿದೆ.