ಪ್ರಜಾಸ್ತ್ರ ಅಪರಾಧ ಸುದ್ದಿ
ಚಿತ್ರದುರ್ಗ: ಮದುವೆಯಾದ 2 ತಿಂಗಳಲ್ಲಿಯೇ ಯುವತಿಯೊಬ್ಬಳು ಕೊಲೆಯಾದ ಘಟನೆ ಕೋಟೆನಾಡಿನ ಹೊಸದುರ್ಗ ತಾಲೂಕಿನ ಮೆಟ್ಟಿಲಹೊಳೆ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಉಮಾ ಕೊಲೆಯಾದ ಮಹಿಳೆಯಾಗಿದ್ದಾಳೆ.
27 ವರ್ಷದ ಚಂದ್ರಪ್ಪ ತನ್ನ ಪತ್ನಿಯನ್ನ ವೇಲ್ ನಿಂದ ಕತ್ತು ಬಿಗಿದು ಹತ್ಯೆ ಮಾಡಿರುವುದು ತಿಳಿದು ಬಂದಿದೆ. ಚಿತ್ರಹಳ್ಳಿ ಠಾಣೆ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತಿಯನ್ನ ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ ಮೇ 28ರಂದು ಉಮಾ ಹಾಗೂ ಚಂದ್ರಪ್ಪ ನಡುವೆ ಮದುವೆ ನಡೆದಿದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ, ಪತಿ ಚಂದ್ರಪ್ಪ ಪರಸ್ತ್ರೀಯೊಂದಿಗೆ ಸಂಬಂಧ ಹೊಂದಿದ್ದನಂತೆ. ಒಮ್ಮೆ ವಿಡಿಯೋ ಕಾಲ್ ನಲ್ಲಿ ಮಾತ್ನಾಡ್ತಿರುವುದನ್ನ ಉಮಾ ನೋಡಿದ್ದಾಳೆ. ಇದನ್ನ ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಮನಸ್ತಾಪ ಉಂಟಾಗಿದೆ.
ಗಂಡನ ವಿಚಾರವನ್ನ ಉಮಾ ಹೆತ್ತವರಿಗೂ ತಿಳಿಸಿದ್ಳಂತೆ. ಹೀಗಿರುವಾಗ ಜುಲೈ 28ರಂದು ಟಿವಿ ನೋಡುವ ವಿಚಾರದಲ್ಲಿ ಇಬ್ಬರಿಗೂ ಗಲಾಟೆಯಾಗಿದೆ. ಆಗ ಪತಿ ಚಂದ್ರಪ್ಪ ಪತ್ನಿ ಉಮಾಗೆ ಜೋರಾಗಿ ಕೆನ್ನೆಗೆ ಹೊಡೆದಿದ್ದಾನೆ. ಇದ್ರಿಂದಾಗಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ವೇಲ್ ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಇಷ್ಟೆಲ್ಲ ಮಾಡಿದ್ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
ಮೃತ ಉಮಾ ಬಾಯಿ, ಮೂಗಿನಲ್ಲಿ ರಕ್ತ ಸುರಿದಿತ್ತು. ಅದರಿಂದ ಅನುಮಾನಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಈ ಬಗ್ಗೆ ತನಿಖೆ ನಡೆಸಿದಾಗ ಕಿರಾತಕ ಪತಿ ಚಂದ್ರಪ್ಪ ತಪ್ಪೊಪ್ಪಿಕೊಂಡಿದ್ದಾನೆ. ಪತಿಯ ಪರಸ್ತ್ರೀ ಸಂಗ ಪ್ರಶ್ನಿಸಿದ್ದೆ ನವವಧು ಜೀವಕ್ಕೆ ಕುತ್ತಾಗಿದ್ದು ನಿಜಕ್ಕೂ ದುರಂತ.