ಪ್ರಜಾಸ್ತ್ರ ಅಪರಾಧ ಸುದ್ದಿ
ಚಿತ್ರದುರ್ಗ: ತನ್ನದೆ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಶವವನ್ನು ಬಾಡಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಮಹಿಳೆಯನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸುಚನಾ ಸೇಠ್(39) ಬಂಧಿತ ಮಹಿಳೆಯಾಗಿದ್ದಾಳೆ.
ಬೆಂಗಳೂರಿನಲ್ಲಿ ಮೈಡ್ ಫುಲ್ ಎಐ ಲ್ಯಾಬ್ ಎನ್ನುವ ಸ್ಟಾರ್ಟ್ ಅಪ್ ಕಂಪನಿಯ ಸಹ ಸಂಸ್ಥಾಪಕಿ ಹಾಗೂ ಸಿಇಒ ಆಗಿರುವ ಸುಚನಾ, ಮಗನೊಂದಿಗೆ ಶನಿವಾರ ಗೋವಾಗೆ ಬಂದಿದ್ದಾಳೆ. ಉತ್ತರ ಗೋವಾದ ಸೋಲ್ ಬ್ಯಾನಿಯನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾಳೆ. ಸೋಮವಾರ ರೂಂ ಖಾಲಿ ಮಾಡಿ, ಬೆಂಗಳೂರಿಗೆ ಹೋಗಲು ಟ್ಯಾಕ್ಸಿ ಬಾಡಿಗೆ ಕೇಳಿದ್ದಾಳೆ.
ಮಹಿಳೆಯೊಂದಿಗೆ ಮಗು ಇಲ್ಲದಿದ್ದಾಗ ಹೋಟೆಲ್ ಸಿಬ್ಬಂದಿ ಅನುಮಾನದಿಂದ ವಿಚಾರಿಸಿದ್ದಾರೆ. ಆಗ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ಹೇಳಿ ಅಲ್ಲಿಂದ ಹೋಗಿದ್ದಾಳೆ. ಹೋಟೆಲ್ ಸಿಬ್ಬಂದಿ ರೂಂ ಕ್ಲೀನ್ ಮಾಡುವ ವೇಳೆ ರಕ್ತದ ಕಲೆ ಪತ್ತೆಯಾಗಿದೆ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವ ವೇಳೆಗಾಗಲೇ ಕಾರು ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಕಡೆ ಬರುತ್ತಿತ್ತು. ಪೊಲೀಸರು ಕಾರು ಚಾಲಕನಿಗೆ ಕೊಂಕಣಿಯಲ್ಲಿ ಮಾಹಿತಿ ನೀಡಿದ್ದಾರೆ. ಆಗ ಕಾರು ಚಾಲಕ ಸಮೀಪದ ಐಮಂಗಲ ಪೊಲೀಸ್ ಠಾಣೆಗೆ ಕಾರು ತೆಗೆದುಕೊಂಡು ಹೋಗಿದ್ದಾನೆ.
ಕಾರ್ ಚೆಕ್ ಮಾಡಿ ಡಿಕ್ಕಿಯಲ್ಲಿ ಬ್ಯಾಗ್ ತೆಗೆದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಯಾವ ಕಾರಣಕ್ಕೆ ಏನೂ ಅರಿಯದ ತನ್ನದೆ ಮಗನನ್ನು ಕೊಂದಿದ್ದಾಳೆ? ಕೊಲೆ ಮಾಡುವ ಸಲುವಾಗಿಯೇ ಗೋವಾಗೆ ಬಂದಿದ್ದಳಾ? ಮೂಲತಃ ಎಲ್ಲಿಯವಳು? ಹೀಗೆ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.