ವಿಜಯಪುರ: ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡ್ತಿದ್ದ ಸಾವಿರಾರು ಕಾರ್ಮಿಕರು ಜಿಲ್ಲೆಯ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾಜಸ್ಥಾನ, ಹರಿಯಾಣ ಮೂಲದ ಸುಮಾರು 1,500 ಜನ ಕಾರ್ಮಿಕರು ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ಸಿಲುಕಿಕೊಂಡಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಕ್ಯಾಂಟರ್, ಲಾರಿಗಳಲ್ಲಿ ಕುಳಿತುಕೊಂಡು ತಂತಮ್ಮ ಊರಿಗೆ ಹೊರಟಿದ್ರು. ಈ ವೇಳೆ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ಗಾಡಿಗಳನ್ನ ಪರಿಶೀಲನೆ ಮಾಡಿದಾಗ ಸಿಲುಕಿಕೊಂಡಿದ್ದಾರೆ. ಅವರೆಲ್ಲರನ್ನ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ತಪಾಸಣೆ ನಡೆಸಲಾಗಿದೆ.
ಕೇಂದ್ರ ಸರ್ಕಾರದ ಆದೇಶದ ಅನ್ವಯ ಧೂಳಖೇಡ ಹತ್ತಿರದ ಮೂರಾರ್ಜಿ ದೇಸಾಯಿ ವಸತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಇವರೆಲ್ಲರಿಗೂ ಊಟದ, ಉಪಚಾರ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದ್ದಾರೆ.