ಪ್ರಜಾಸ್ತ್ರ ಸುದ್ದಿ
ಬರ್ವಾದ್: ಜಾರ್ಖಂಡನ ಧನ್ ಬಾದ್ ನಲ್ಲಿ ಬಿಜೆಪಿ ವಿಜಯ ಸಂಕಲ್ಪ ಮಹಾರ್ಯಾಲಿ ಶುಕ್ರವಾರ ನಡೆಯಿತು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿ, ದೇಶ ಮೋದಿ ಗ್ಯಾರೆಂಟಿ ನಂಬಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಎನ್ ಡಿಎ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಎಂಎಂ ನೇತೃತ್ವದ ಸರ್ಕಾರ ರಾಜ್ಯವನ್ನು ಹಾಳು ಮಾಡಿದೆ. ರಾಜ್ಯದಲ್ಲಿ ಸುಲಿಗೆ ಮಿತಿ ಮೀರಿದೆ. ಜನರಿಂದ ಲೂಟಿ ಮಾಡಿದ ಹಣವನ್ನು ಜನರಿಗೆ ವಾಪಸ್ ನೀಡುತ್ತೇವೆ. ಜಲ್ ಜೀವನ್ ಮಿಷನ್, ಪಿಎಂ ಆವಾಸ್ ಯೋಜನೆಯನ್ನು ಯಶಸ್ವಿಗೊಳಿಸಲು ಇಂಡಿಯಾ ಮೈತ್ರಿಕೂಟ ಬಿಡುತ್ತಿಲ್ಲವೆಂದು ವಾಗ್ದಾಳಿ ನಡೆಸಿದರು.
ನಂತರ ಪಶ್ಚಿಮ ಬಂಗಾಳದ ಆರಮ್ ಬಾಗ್ ನಲ್ಲಿಯೂ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಸಂದೇಶ್ ಕಾಲಿ ಪ್ರಕರಣದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದರು. ತೃಣಮೂಲ ಕಾಂಗ್ರೆಸ್ ನಾಯಕರಿಂದ ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಇಡೀ ದೇಶ ನಾಚಿಕೆ ಪಡುತ್ತಿದೆ ಎಂದರು.