ಸಿಂದಗಿ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಯೋಜಿಸಿದ್ದ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ಶಾಂತೂ ಹಿರೇಮಠ ಚಾಲನೆ ನೀಡಿದ್ರು.
ಪುಟಾಣಿ ಜೊತೆಯಾಗಿ ದೀಪಬೆಳಗಿಸುವ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಮಾತ್ನಾಡಿದ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹರ್ಡೇಕರ್ ಮಂಜಪ್ಪ ಆದಿಯಾಗಿ ಸಿಂಪಿ ಲಿಂಗಣ್ಣ, ಕಂಚಾಣಿ, ಹ.ಮಾ ಪೂಜಾರಿ ಸೇರಿದಂತೆ ಅನೇಕರು ನೀಡಿದ ಕೊಡುಗೆ ಅಪಾರ ಅಂತಾ ಹೇಳಿದ್ರು. ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ಅನ್ನೋ ಕವಿತೆ ಸಾಲುಗಳನ್ನ ನೆನಪಿಸಿಕೊಳ್ಳುತ್ತಾ, ಮಸಾಪ ಮಾಡಬೇಕಾದ ಕೆಲಸದ ಬಗ್ಗೆ ಸಲಹೆ ನೀಡಿದ್ರು.
ಮುಖ್ಯ ಅತಿಥಿಯಾಗಿ ಮಾತ್ನಾಡಿದ ಹಿರಿಯ ಸಾಹಿತಿ ಡಾ.ಚೆನ್ನಪ್ಪ ಕಟ್ಟಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಹಿರಿಯರು ಮತ್ತು ಮಕ್ಕಳು ಸಮಪ್ರಮಾಣದಲ್ಲಿ ಇರ್ಲಿ ಅಂತಾ ಹೇಳಿದ್ರು. ಮಕ್ಕಳ ಸಾಹಿತ್ಯದಲ್ಲಿ ವಿಜಯಪುರ ಜಿಲ್ಲೆ ಸಾಕಷ್ಟು ಕೊಡುಗೆ ನೀಡಿದೆ. ಆ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ರಚಿಸಿದ ಸಾಹಿತಿಗಳ ಕುರಿತು ನಿರಂತರ ಕಾರ್ಯಕ್ರಮವಾಗಬೇಕು. ಮಕ್ಕಳು ಹಾಗೂ ಹಿರಿಯರು ನೀಡಿದ ಉಪನ್ಯಾಸ ದಾಖಲಾಗುವಂತೆ ಪ್ರತಿ ವರ್ಷ ಪದಾಧಿಕಾರಿಗಳೆಲ್ಲ ಸೇರಿ ಪುಸ್ತಕ ರೂಪ ನೀಡಬೇಕು ಅಂತಾ ಹೇಳುತ್ತಾ, ‘ಮಸಾಪ’ಕ್ಕೆ ದಿಕ್ಸೂಚಿಯಾಗಿ ಕೆಲ ಸಲಹೆ ಸೂಚನೆ ನೀಡಿದ್ರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಜಂಬುನಾಥ ಕಂಚಾಣಿ ಪದ ಪತ್ರ ಪ್ರಧಾನ ಮಾಡಿ ಮಾತ್ನಾಡುತ್ತಾ, ಮಕ್ಕಳ ಸಾಹಿತ್ಯ ಘಟಕದಿಂದ ಕಾವ್ಯ, ಕಥೆ, ನಾಟಕ ಕಮ್ಮಟಗಳನ್ನ ಆಯೋಜಿಸುವುದು. ಮುಂದಿನ ವರ್ಷ ಆಲಮೇಲದಲ್ಲಿ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಮಾಹಿತಿ ನೀಡಿದ್ರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಹಿರಿಯ ಜಾನಪದ ವಿದ್ವಾಂಸ ಡಾ.ಎಂ.ಎಂ ಪಡಶೆಟ್ಟಿ ಮಾತ್ನಾಡಿ, ಮಕ್ಕಳಲ್ಲಿ 1ರಿಂದ 6 ವರ್ಷ, 7ರಿಂದ 12 ಹಾಗೂ 12ರಿಂದ 18 ವರ್ಷದ ವರ್ಗ ಮಾಡಿಕೊಂಡು ಅವರಿಗೆ ಬೇಕಾದ ಸಾಹಿತ್ಯವನ್ನ ನೀಡುವ ಕೆಲಸ ಮಾಡಬೇಕು ಅಂತಾ ಹೇಳಿದ್ರು. ಮಕ್ಕಳಂದ್ರೆ ಮನುಜು ಕುಲದ ತಂದೆ ತಾಯಿಗಳಿದ್ದಂತೆ. ಅವರನ್ನ ಹಗುರವಾಗಿ ಕಾಣಬೇಡಿ ಅನ್ನೋ ಕಿವಿ ಮಾತು ಮಾತು ಹೇಳಿದ್ರು.
ಮಸಾಪ ಜಿಲ್ಲಾ ಉಪಾಧ್ಯಕ್ಷ ರಾಶಿ ವಾಡೇದ, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗ ಚೌಧರಿ, ಆಲಮೇಲ ಮಸಾಪ ಅಧ್ಯಕ್ಷ ಪಿ.ಬಿ ಅವಜಿ, ಪುರಸಭೆ ಮಾಜಿ ಸದಸ್ಯ ರಾಜು ಕೂಚಬಾಳ, ಮಸಾಪ ನೂತನ ಅಧ್ಯಕ್ಷ ಅಶೋಕ ಬಿರಾದರ ಉಪಸ್ಥಿತರಿದ್ರು. ಡಾ.ಪ್ರಕಾಶ ಸ್ವಾಗತ ಗೀತೆ, ವಿದ್ಯಾರ್ಥಿಗಳು ನಾಡಗೀತೆ ಹಾಡಿದ್ರು. ಪತ್ರಕರ್ತ ಸಿದ್ದಲಿಂಗ ಕಿಣಗಿ ಸ್ವಾಗತಿಸಿದ್ರು. ಬಾಲಕಿ ಅಕ್ಷತಾ ಭರತನಾಟ್ಯದ ಮೂಲಕ ರಂಜಿಸಿದ್ಳು. ಪವನ ಕುಲ್ಕರ್ಣಿ ನಿರೂಪಣೆ ಹಾಗೂ ಶಿವಕುಮಾರ ಕುಂದಗೋಳ ವಂದನಾರ್ಪಣೆ ಮಾಡಿದ್ರು.