ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸಿಂದಗಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಹೇಳಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲರಿಗೆ, ಜಿಲ್ಲಾ ಹೋರಾಟ ಸಮಿತಿ ಶನಿವಾರ ಮನವಿ ಸಲ್ಲಿಸಿದೆ.
ಸರ್ಕಾರದ ಮಟ್ಟದಲ್ಲಿ ವಿಜಯಪುರ ಜಿಲ್ಲೆ ಇಬ್ಭಾಗಿಸುವ ಇರಾದೆ ಇದ್ದರೆ, ಜಿಲ್ಲೆಗೆ ಬೇಕಾದ ಎಲ್ಲ ಅರ್ಹತೆ ಹೊಂದಿರುವ ಸಿಂದಗಿಯನ್ನು ಆದ್ಯತೆ ಮೇರೆಗೆ ಜಿಲ್ಲೆ ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಸರ್ಕಾರದ ಮುಂದೆ ಜಿಲ್ಲೆ ವಿಭಜನೆ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಚುನಾವಣೆ ಮುಗಿದ ಬಳಿಕ ನಿಮ್ಮ ಬೇಡಿಕೆ ಸರ್ಕಾರಕ್ಕೆ ತಿಳಿಸುತ್ತೇನೆ. ಜಿಲ್ಲೆ ವಿಭಜಿಸಿದರೆ ಮಾತ್ರ ಸಿಂದಗಿ ಜಿಲ್ಲೆ ಮಾಡಿ ಎಂಬ ಬೇಡಿಕೆ ಪರಿಗಣಿಸಲಾಗುವುದು ಎಂದು ಹೇಳಿದರು.
ಈ ವೇಳೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಪರಿಷತ್ ಸದಸ್ಯ ಅರುಣ ಶಹಾಪೂರ, ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಶೈಲಜಾ ಸ್ಥಾವರಮಠ, ಸುನಂದ ಯಂಪೂರೆ ಸೇರಿದಂತೆ ಅನೇಕರಿದ್ದರು.