ಸಿಂದಗಿ: ಪಟ್ಟಣದ ಪೊಲೀಸ್ರ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ಖತರ್ನಾಕ್ ಕಳ್ಳರು ಅಂದರ್ ಆಗಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೌಸರ ನಾಯಕ ತಾಂಡಾದ ಸುರೇಶ ಗಂಗಾರಾಮ ಚವ್ಹಾಣ ಹಾಗೂ ಸರದಾರ ಗೌನು ಕಾಳೆ ಅನ್ನೋ ಇಬ್ಬರು ಕಳ್ಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ತಾಲೂಕಿನ ಹಲವು ಕಡೆ ಕಳ್ಳತನ ಪ್ರಕರಣಗಳು ದಾಖಲೆ ಆಗ್ತಿದ್ವು. ಇದರ ಹಿಂದೆ ಯಾರ ಕೈವಾಡವಿದೆ ಅನ್ನೋ ಸಣ್ಣ ಸುಳಿವು ಸಹ ಇರ್ಲಿಲ್ಲ. ಈ ಕಳ್ಳರ ಜಾಲ ಪತ್ತೆ ಹಚ್ಚಲು ಸಿಪಿಐ ದ್ಯಾಮಣ್ಣವರು ಮತ್ತು ಪಿಎಸ್ಐ ನಿಂಗಣ್ಣ ಪೂಜಾರಿ ಅವರ ನೇತೃತ್ವದಲ್ಲಿ ತಂಡವೊಂದು ರಚನೆಯಾಯ್ತು. ತಾಲೂಕಿನ ಮೋರಟಗಿ ಗ್ರಾಮದಲ್ಲಿ ನಸುಕಿನ ಜಾವ 4ಗಂಟೆ ಸುಮಾರಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡ್ತಿದ್ದ ಇಬ್ಬರನ್ನ ಹಿಡಿದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.
ಬಂಧಿತ ಸುರೇಶ ಹಾಗೂ ಸರದಾರ ವಿಚಾರಣೆ ನಡೆಸಿದಾಗ ತಾಲೂಕಿನ ಖೈನೂರ, ಸುಂಗಠಾಣ ಹಾಗೂ ಮೋರಟಗಿ ಗ್ರಾಮಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 193.4 ಗ್ರಾಂ ಚಿನ್ನದ ಆಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಇನ್ನು ಕೆಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗೆ ಪೊಲೀಸ್ ಟೀಂ ಸಜ್ಜಾಗಿದೆ.
ಸಿಪಿಐ ದ್ಯಾಮಣ್ಣವರು ಮತ್ತು ಪಿಎಸ್ಐ ನಿಂಗಣ್ಣ ಪೂಜಾರಿ ಅವರ ನೇತೃತ್ವದಲ್ಲಿ ತಂಡದಲ್ಲಿ ಸಿಬ್ಬಂದಿಗಳಾದ ಎ.ಬಿ ನಾವಿ, ಎಚ್.ಎಸ್ ಬಗಲಿ, ಸಿ.ಡಿ ಹತ್ತರಕಿ, ಜೆ.ಎಸ್, ಗಲಗಲಿ, ಶಿವು ನಾಟಿಕಾರ, ಆರ್ ಎಲ್.ಕಟ್ಟಿಮನಿ, ಎಸ್. ಎಲ್ ತನ್ನಿಹಳ್ಳಿ, ವೈ. ಕೆ ಉಕಮನಾಳ ಹಾಗೂ ವಿಲಾಸ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳ್ಳರನ್ನ ಯಶಸ್ವಿಯಾಗಿ ಪತ್ತೆ ಹಚ್ಚಿದ್ದಕ್ಕೆ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಇಂಡಿ ಪೊಲೀಸ್ ಉಪಾಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.