ನವದೆಹಲಿ: ಅಯೋಧ್ಯೆಯಲ್ಲಿನ 2.77 ಎಕರೆ ಭೂವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡ್ತಿದ್ದು, ದೇಶದ ತುಂಬಾ ಬಿಗಿ ಬಂದೋಬಸ್ತಿ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಾಕಷ್ಟು ಭದ್ರತೆ ನೀಡಿದ್ದು, ಕಟ್ಟೆಚ್ಚರ ಸಹ ವಹಿಸಲಾಗಿದೆ.
ತೀರ್ಪು ಹಿನ್ನೆಲೆಯಲ್ಲಿ ಐವರು ನ್ಯಾಯಮೂರ್ತಿಗಳಿಗೆ ಝೆಡ್ ಕ್ಯಾಟಗೆರಿ ಭದ್ರತೆಯನ್ನ ನೀಡಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿರಂಜನ ಗೊಗೊಯ್, ನ್ಯಾಯಮೂರ್ತಿ ಎಸ್.ಎ ಬೋಬ್ಡೆ, ನ್ಯಾ. ಡಿ.ವೈ ಚಂದ್ರಚೂಡ, ನ್ಯಾ. ಅಶೋಕ ಭೂಷಣ, ನ್ಯಾ. ಎಸ್. ಅಬ್ದುಲ ನಜೀರ ಸೇರಿದಂತೆ ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೆಯನ್ನ ನೀಡಲಾಗಿದೆ.
ಅಯೋಧ್ಯೆ ಭೂವಿವಾದ ಸಾಕಷ್ಟು ಸೂಕ್ಷ್ಮ ವಿಚಾರ ಆಗಿರುವುದ್ರಿಂದ ನ್ಯಾಯಮೂರ್ತಿಗಳಿಗೆ ಹೈಸೆಕ್ಯೂರಿಟಿ ಇರುವ ಭದ್ರತೆ ನೀಡಲಾಗಿದೆ. ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯ್ ಅವರು ನಿವೃತ್ತಿ ಹೊಂದಲಿದ್ದು, ಅದಕ್ಕೂ ಮೊದ್ಲು ನೀಡ್ತಿರುವ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ.
ಶಾಂತಿ ಕಾಪಾಡಲು ಎಲ್ಲರೂ ಮನವಿ
ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದು, ಶಾಂತಿಯನ್ನ ಕಾಪಾಡುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪನ್ನ ಗೌರವಿಸಬೇಕು ಎಂದಿದ್ದಾರೆ. ಇನ್ನು ಯಾವುದೇ ರೀತಿಯ ತೀರ್ಪು ಬಂದರೂ ಪ್ರತಿಯೊಬ್ಬರು ಶಾಂತಿ ಕಾಪಡಬೇಕೆಂದು ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡರು ಸಹ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಭದ್ರತೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪರಿಸ್ಥಿತಿಯನ್ನ ನೋಡಿಕೊಂಡು ಸೋಮವಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಸೋಷಿಯಲ್ ಮೀಡಿಯಾದ ಮೇಲೆ ಕಣ್ಣು
ಇನ್ನು ಸೋಷಿಯಲ್ ಮೀಡಿಯಾದ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಯಾವುದೇ ರೀತಿಯ ಕೋಮು ಸೌಹಾರ್ದತೆ ಹಾಳು ಮಾಡುವ ಸಂದೇಶಗಳನ್ನ ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಹೆಚ್ಚು ಗಮನ ವಹಿಸಬೇಕು. ವಾಟ್ಸಪ್ ಗ್ರೂಪ್ ಅಡ್ಮನ್ ಗಳು ಈ ವಿಚಾರದಲ್ಲಿ ಎಚ್ಚರದಿಂದ ಇರುವುದು ಉತ್ತಮ