ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಯಾಗಿರುವ ದರ್ಶನ ಎಂ.ವಿ ಅವರು ಬರೆದಿರುವ ‘ಬಂಡವಾಳ’ ಅನ್ನೋ ಕವಿತೆ ತುಂಬಾ ಮಾರ್ಮಿಕವಾಗಿದೆ. ಈ ಬದುಕಿನಲ್ಲಿ ಸಂಬಂಧಗಳ ಬಂಧನದ ಮೌಲ್ಯ ಮುಖ್ಯ. ಭಾವನೆಗಳೇ ಇಲ್ಲದ ಖಾಲಿ ನೋಟಿಗಿಂತ ಭಾವನೆ ತುಂಬಿದ ಜೊತೆಗಾರರು, ನಿನ್ನ ಸಾಮರ್ಥ್ಯ ಮೊದಲು ಅನ್ನೋ ಸಾಲುಗಳು ವಾಸ್ತವ್ಯಕ್ಕೆ ಹಿಡಿದ ಕನ್ನಡಿಯಾಗಿವೆ…
ಹಣವೆಂಬ ಭೂತ ನಡೆಸಿಹುದು ಮೇಳ
ಅತಿಯಾಗಿ ಮಿತಿಮೀರಿ ತೊಡಿಸಿಹುದು ಕೋಳ
ಚಿತ್ರ ವಿಚಿತ್ರವಾಗಿ ಹರಿದಂಚಿತು ಬಾಳ
ಧನವಲ್ಲವೋ ಮೂಢ ನಿನ್ನ ಬಂಡವಾಳ
ಕೀಳರಿಮೆ ಹುಟ್ಟಿಸು ಕಾಲಿಗೆ ಕಸವೆನಿಸಿ
ಬೆಂಗಾವಲಾಗಿದ್ದ ಸಂಬಂಧವ ಕಡೆಗಣಿಸಿ
ಹುರಿದುಂಬಿಸಿ ಉಸಿರುಗಟ್ಟಿಸಿ
ಕೆಡಿಸಿವುದು ಮನ ಮನೆಗಳ ಅಂಗಳವ
ಅಂಜಿದರೆ ಮನಸು ಅಂಜಿತದು ಕನಸು
ಎಡವಿದರೆ ಉಕ್ತಿ ಕ್ಷೀಣಿಸುವುದು ನಿನ್ನಾಸಕ್ತಿ
ಅಂಕುರಕೆ ಪೋಷಣೆ ಜೀವನಕೆ ಪ್ರೇರಣೆ
ಆಮಿಷದ ಧಾರಣೆ ನಿನ್ನೊಳಿತಿಗೆ ಮತಿಭ್ರಮಣೆ
ನಿನ್ನೊಳಗೆ ಅಡಗಿಹುದು ಮನಗಂಡರೆ ಸರಳ
ಅವಿತು ಕೂತಿಹುದು ಬಡಿದೆಬ್ಬಿಸೋ ಮರುಳ
ಘನ ಘೋರವಿದುವೇ ತೋಳ್ಬಲಕೆ ಬಲಾಬಲಾ
ಹಣವಲ್ಲವೋ ಕುನ್ನಿ ಶ್ರಮವೇ ನಿನ್ನ ಬಂಡವಾಳ
ಸತ್ಯಾರ್ಥ ಅರಿಸಿ
ಸಮರೂಪ ಬೆಳೆಸಿ
ಜ್ಯೋತಿಯನು ಸ್ಮರಿಸಿ
ಆಸೆಯನು ಅರಳಿಸಿ
ಚಿತ್ರಕೃಪೆ : ಅಂತರ್ಜಾಲ