ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ಟಿಕೆಟ್ ವಂಚಿತ ಬಿಜೆಪಿ ನಾಯಕರ ರಾಜೀನಾಮೆ ಮುಂದುವರೆದಿದೆ. ಒಬ್ಬರಾದ ಮೇಲೆ ಒಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಈ ಮೂಲಕ ಕಮಲ ನಾಯಕರು ಹೈಕಮಾಂಡ್ ಗೆ ಟೆನ್ಷನ್ ನೀಡುತ್ತಿದ್ದಾರೆ.
ಲಕ್ಷ್ಮಣ ಸವದಿ ಬೆನ್ನಲ್ಲೆ ಹಾವೇರಿ ಶಾಸಕ ನೆಹರು ಓಲೇಕಾರ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಸಿಎಂ ಬೊಮ್ಮಾಯಿ ಸೇರಿ ಇತರೆ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಇಲ್ಲಿ ಬ್ಯಾಡಗಿಯ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಗವಿಸಿದ್ದಪ್ಪ ದ್ಯಾಮಣ್ಣವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದು ಶಾಸಕ ಓಲೇಕಾರ ರಾಜೀನಾಮೆಗೆ ಕಾರಣವಾಗಿದೆ.
ವರುಣಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೋಟದಪ್ಪ ಬಸವರಾಜು ರಾಜೀನಾಮೆ ಘೋಷಿಸಿದ್ದಾರೆ. ವಿ.ಸೋಮಣ್ಣಗೆ ಟಿಕೆಟ್ ಘೋಷಿಸಿದ್ದು, ಇದರಿಂದ ಅಸಮಾಧಾನಗೊಂಡ ತೋಟದಪ್ಪ ಬಸವರಾಜು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹೊಸದುರ್ಗ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ಸಲ್ಲಿಸಿದ್ದಾರೆ. ಶಿರಸಿಯಲ್ಲಿ ಸಭಾಧ್ಯಕ್ಷ ಕಾಗೇರಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಗೂಳಿಹಟ್ಟಿ ಬದಲು ಲಿಂಗಮೂರ್ತಿಗೆ ಬಿಜೆಪಿ ಟಿಕೆಟ್ ಘೋಷಿಸಲಾಗಿದೆ.
ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ತಮಗೆ ಟಿಕೆಟ್ ಸಿಗದೆ ಹೋದರೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದಿದ್ದಾರೆ.