ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸದಾ ಒಂದಲ್ಲ ಒಂದು ವಿವಾದಾತ್ಮಕ, ಪ್ರಚೋದನಕಾರಿ ಹೇಳಿಕೆ ನೀಡುವ ಬಿಜೆಪಿಗರಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸಹ ಒಬ್ಬರು. ಕಳೆದ ಸರಿಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳದ ಸಂಸದರು, ಈಗ ಭರ್ಜರಿ ಪ್ರಚಾರದಲ್ಲಿದ್ದಾರೆ. ಅದು ಅವರ ಎಂದಿನ ಪ್ರಚೋದನಕಾರಿ ಹೇಳಿಕೆಯಿಂದಲೇ.
ಅಯೋಧ್ಯ ರಾಮ ಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಮಗನೇ ಅಂತೆಲ್ಲಾ ಬೈಯುವ ಮೂಲಕ ತಮ್ಮ ಸ್ಥಾನದ ಗೌರವ ಮರೆತು ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದಾರೆ. ಇನ್ನು ಭಟ್ಕಳದಲ್ಲಿರುವ ಚಿನ್ನದಪಲ್ಲಿ ಮಸೀದಿ ಕೂಡ ಬಾಬ್ರಿ ಮಸೀದಿಯಂತೆ ನಿರ್ನಾಮವಾಗಲಿದೆ ಎಂದು ಪ್ರಚೋದನಕಾರಿ ಹೇಳಿಕೆ ಇಟ್ಟಿದ್ದಾರೆ.
ಸಂಸದ ಹೆಗಡೆ ಈ ರೀತಿ ಹೇಳುವ ಮೂಲಕ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಬಿಜೆಪಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಸಂವಿಧಾನ ಬದಲಿಸುತ್ತೇವೆ ಎನ್ನುವ, ಸಂಸ್ಕಾರವಿಲ್ಲದವರಿಂದ ಏನನ್ನ ಬಯಸಲು ಸಾಧ್ಯವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇವರಿಗೆ ಸಿದ್ದರಾಮಯ್ಯ ಟಾರ್ಗೆಟ್ ಆಗಿರುವುದು, ಹಿಂದುಳಿದ ವ್ಯಕ್ತಿಯೊಬ್ಬ ರಾಜ್ಯ ಆಳುವುದು ಸಹಿಸಿಕೊಳ್ಳಲು ಆಗುತ್ತಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಕೋಮುಸಂಘರ್ಷ ಸೃಷ್ಟಿಸುವ ಸಲುವಾಗಿಯೇ ಬಿಜೆಪಿ ಇಂತವರಿಂದ ಹೇಳಿಕೆ ಕೊಡಿಸುತ್ತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗುತ್ತಿದೆ.
ಪ್ರಚೋದನಕಾರಿ ಹೇಳಿಕೆ ಕೊಡುವ ಜನನಾಯಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಈ ನಿಟ್ಟಿನಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮವಾಗುತ್ತಾ, ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಕೆಲಸವಾಗುತ್ತಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.