ಪ್ರಜಾಸ್ತ್ರ ಸುದ್ದಿ
ಸಿಂದಗಿ: ಮುಂಬರುವ 2023ರ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ರಾಜ್ಯಾದ್ಯಂತ ನಡೆಸುತ್ತಿದೆ. ಶನಿವಾರ ಪಟ್ಟಣದಲ್ಲಿ ಯಾತ್ರೆ ನಡೆಸಲಾಯಿತು. ಇದಕ್ಕೂ ಮೊದಲು ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ನಾಯಕರು ಹಲವು ವಿಚಾರಗಳ ಕುರಿತು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ. ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲು ಸಂಚಾರಗಳು ಪ್ರಾರಂಭವಾಗಿವೆ ಎಂದರು. ಈ ವೇಳೆ ಸಿಂದಗಿಗೆ ರೈಲು ಸಂಪರ್ಕ ಆಗಬೇಕು ಅನ್ನೋದು ತಾಲೂಕಿನ ಜನರ ಬಹುವರ್ಷಗಳ ಕನಸು. ಇದುವರೆಗೂ ಈಡೇರದ ಬಗ್ಗೆ ಏನು ಹೇಳುತ್ತೀರಿ ಅನ್ನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿಯೂ ರಾಜ್ಯದಲ್ಲಿ ನಮ್ಮದೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಸಿಂದಗಿಗೆ ರೈಲು ಸಂಪರ್ಕ ಮಾಡುತ್ತೇವೆ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯುನಲ್ಲಿದೆ. ಅಧಿಕಾರಕ್ಕೆ ಬರುತ್ತೇವೆ ಅನ್ನೋ ತಿರುಕನ ಕನಸು ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಆರ್.ಎಸ್ ಪಾಟೀಲ ಕೂಚಬಾಳ, ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿವೇಕಾನಂದ ಡಬ್ಬಿ, ಮಂಡಳ ಅಧ್ಯಕ್ಷ ಈರಣ್ಣ ರಾವೂರ, ರಾಜ್ಯ ಮಹಿಳಾ ಘಟಕದ ಗೀತಾ ವಿವೇಕಾನಂದ, ಗುರು ತಳವಾರ, ಶಿವುಕುಮಾರ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.
ಅಂಬೇಡ್ಕರ್ ಸರ್ಕಲ್ ನಿಂದ ಯಾತ್ರೆ ಪ್ರಾರಂಭವಾಗಿ ಅಂಬಿಗೇರ ಚೌಡಯ್ಯ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ವಿವೇಕಾನಂದ ಸರ್ಕಲ್ ಮಾರ್ಗವಾಗಿ ಹಾಯ್ದು ಬಸವೇಶ್ವರ ಸರ್ಕಲ್ ಗೆ ಬಂದು ಸಮಾಪ್ತಿಗೊಂಡಿತು.