ಪ್ರಜಾಸ್ತ್ರ ಸುದ್ದಿ
ಬೆಂಗಳೂರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್ ಅವರು ಇದೀಗ ಬಿಜೆಪಿ ಸೇರುವ ಹಂತದಲ್ಲಿದ್ದಾರೆ. ಆದರೆ, ಇನ್ನೂ ಸೇರ್ಪಡೆಯಾಗಿಲ್ಲ.
ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬರೀಶ್ ಹಾಗೂ ಮಂಡ್ಯದ ಜನರ ವಿಚಾರಗಳನ್ನು ಹಂಚಿಕೊಂಡರು. ಜೊತೆಗೆ ಪ್ರಧಾನಿ ಮೋದಿ ಅವರನ್ನು ಹೊಗಳಿ ಮಾತನಾಡಿದರು. ನಾನು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದರು. ಈ ಮೂಲಕ 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಪರ ಕೆಲಸ ಮಾಡುವ ಕುರಿತು ಬಹಿರಂಗ ಪಡಿಸಿದರು. ಆದರೆ, ಪಕ್ಷ ಸೇರ್ಪಡೆಯಾಗಿಲ್ಲ.
ಸಂಸದೆ ಬಿಜೆಪಿ ಸೇರ್ಪಡೆಗೆ ಕಾನೂನು ತೊಡಕು
ಸಂಸದೆ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಸಂಸದೆಯಾಗಿ ಮೂರು ಮೂಕ್ಕಾಲು ವರ್ಷ ಆಗುತ್ತಿದೆ. ಈಗ ಅವರು ಯಾವುದೇ ಪಕ್ಷ ಸೇರ್ಪಡೆಯಾಗುತ್ತೇನೆ ಎಂದರೆ ಕಾನೂನು ತೊಡಕು ಬರುತ್ತೆ. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಪಕ್ಷೇತರ ಅಭ್ಯರ್ಥಿ ಗೆದ್ದರೆ, ಒಂದು ಪಕ್ಷ ಸೇರಲು 6 ತಿಂಗಳ ಕಾಲಾವಕಾಶ ಇರುತ್ತೆ.
ಸ್ವತಂತ್ರವಾಗಿ ಗೆದ್ದ ಶಾಸಕ, ಸಂಸದ 6 ತಿಂಗಳ ಒಳಗಾಗಿ ಯಾವುದೇ ಪಕ್ಷ ಸೇರ್ಪಡೆಯಾಗದಿದ್ದರೆ ಮುಂದೆ ಕಾನೂನು ಸಮಸ್ಯೆ ಎದುರಾಗುತ್ತೆ. ಒಂದೇ ವೇಳೆ ಅವರು ಸೇರ್ಪಡೆಯಾಗಲೇಬೇಕು ಎಂದಾದರೆ ತಮ್ಮ ಶಾಸಕ, ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಆಗ ಉಪ ಚುನಾವಣೆ ನಡೆಯುತ್ತೆ. ಹೀಗಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರ್ಪಡೆಯಾಗಿಲ್ಲ. 2024ರ ಲೋಕಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಅವಕಾಶವಿದೆ. ಈ ಅವಧಿ ಪೂರ್ಣಗೊಂಡ ಬಳಿಕ ಬಿಜೆಪಿ ಸೇರಬಹುದು ಅಥವ ಮತ್ತೆ ಏನಾದರೂ ಬದಲಾವಣೆ ಆಗಬಹುದು ಕಾದು ನೋಡಬೇಕು.