ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಲುವೆ ಒಡೆದು ಕಡಿ ಮಿಷನ್ ಗೆ ಅಕ್ರಮವಾಗಿ ನೀರು ಪೂರೈಕೆ ಮಾಡಿಕೊಂಡ ಘಟನೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶಾಸಕರು ಪ್ರಾರಂಭಿಸಿದ್ದಾರೆ. ಆಲಮಟ್ಟಿ ಜಲಾಯಶಯದಿಂದ ಕಾಲುವೆ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ. ಆದರೆ, ಪಟ್ಟಣದ ಸಮೀಪದಲ್ಲಿರುವ ಆಲೂರ ಅಂಡ್ ಕಂಪನಿಯ ಕಡಿ ಮಷಿನ್ ಗೆ ಸಂಬಂಧಿಸಿದವರು, ಕಾಲುವೆ ಒಡೆದು ನೀರು ಹರಿಸಿಕೊಳ್ಳುತ್ತಿದ್ದಾರೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷ ಅಜೀಜ್ ಯಲಿಗಾರ ಆಕ್ರೋಶ ಹೊರ ಹಾಕಿದ್ದಾರೆ.
ಹಲವಾರು ವರ್ಷಗಳ ಹೋರಾಟದ ಫಲವಾಗಿ ಈಗ ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಆದರೆ, ಕಡಿ ಮಷಿನ್ ನವರು ಅಕ್ರಮವಾಗಿ ನೀರು ಪಡೆಯುತ್ತಿದ್ದು, ರೈತ ಸಂಘದ ಪದಾಧಿಕಾರಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ವಿಷಯ ತಿಳಿದು ತಹಶೀಲ್ದಾರ್ ಸಿ.ಎ ಗುಡಿದಿನ್ನಿ, ನೀರು ಹರಿವುದನ್ನು ಬಂದ್ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಲುವೆಯನ್ನೇ ಒಡೆದು ನೀರು ಪಡೆಯುತ್ತಾರೆ ಅಂದರೆ ಇದರಲ್ಲಿ ಯಾರೆಲ್ಲ ಕೈವಾಡವಿದೆ ಅನ್ನೋದರ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.