ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಮತ್ತೆ ಸಿಎಂ ಬದಲಾವಣೆ ಚರ್ಚೆ ಶುರುವಾಗಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇನ್ನು 6 ತಿಂಗಳು ಸಹ ಕಳೆದಿಲ್ಲ. ಅದಾಗ್ಲೇ ಸಿಎಂ ಬದಲಾವಣೆಯ ಮಾತುಗಳು ಮುನ್ನೆಲೆಗೆ ಬರುತ್ತಿವೆ. ಯಡಿಯೂರಪ್ಪ ಬಳಿಕ ಅದೆ ಸಮುದಾಯದ ಬೊಮ್ಮಾಯಿಗೆ ಸಿಎಂ ಸ್ಥಾನ ನೀಡಲಾಯ್ತು. ಈಗ ಮತ್ತದೆ ಸಮುದಾಯಕ್ಕೆ ಸಿಎಂ ಸ್ಥಾನ ಎನ್ನಲಾಗುತ್ತಿದೆ.
ಸಿಎಂ ಇದ್ದ ವೇದಿಕೆಯಲ್ಲಿ ಸಚಿವ ಮುರುಗೇಶ್ ನಿರಾಣಿ, ಬೊಮ್ಮಾಯಿ ಅವರು ಕೇಂದ್ರಕ್ಕೆ ಹೋಗುತ್ತಾರೆ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಸಚಿವ ಕೆ.ಎಸ್ ಈಶ್ವರಪ್ಪ, ಮುರುಗೇಶ್ ನಿರಾಣಿ ಇದ್ದ ವೇದಿಕೆಯಲ್ಲಿ ಮುಂದೆ ನಿರಾಣಿ ಸಹ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ. ಅಲ್ದೇ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಸ್ವಾಮೀಜಿಯೊಬ್ಬರು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.
ಇದರ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಕ್ಕೆ ಕಳಿಸುವ ಚಿಂತನೆ ನಡೆದಿದೆಯಂತೆ. ಒಕ್ಕಲಿಗ ಸಮುದಾಯದ ನಾಯಕಿ ಶೋಭಾ ಕರಂದ್ಲಾಜೆಗೆ ರಾಜ್ಯದಲ್ಲಿ ದೊಡ್ಡ ಹುದ್ದೆ ನೀಡುವ ಮೂಲಕ ಪ್ರಬಲ ಸಮುದಾಯ ಹಾಗೂ ಹೆಣ್ಮಕ್ಕಳಿಗೆ ಅವಕಾಶ ನೀಡಲಾಗುತ್ತೆ ಅನ್ನೋ ಅಸ್ತ್ರದ ಮೂಲಕ ಮುಂದಿನ ಚುನಾವಣೆ ಎದುರಿಸಬಹುದು ಅನ್ನೋ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ ಎನ್ನಲಾಗುತ್ತಿದ್ದು, ಈ ಕಾರಣಕ್ಕೆ ಕೇಂದ್ರದಿಂದ ಇಬ್ಬರು ರಾಜ್ಯಕ್ಕೆ ರಾಜ್ಯದಿಂದ ಇಬ್ಬರು ಕೇಂದ್ರಕ್ಕೆ ಎಂದು ಹೇಳಲಾಗುತ್ತಿದೆ. ಅದೇನಾಗುತ್ತೆ ಕಾದು ನೋಡಬೇಕು.