ಪ್ರಜಾಸ್ತ್ರ ಸುದ್ದಿ
ವಿಜಯಪುರ: ರಾಜ್ಯದಲ್ಲಿ ಇದೀಗ 2023ರ ವಿಧಾನಸಭಾ ಚುನಾವಣೆಯ ಜೊತೆಗೆ ಮುಖ್ಯಮಂತ್ರಿ ಯಾರಾಗುತ್ತಾರೆ? ಯಾರಾಗಬೇಕು? ಯಾವ ಸಮುದಾಯದವರು ಆಗಬೇಕು ಅನ್ನೋ ಚರ್ಚೆ ಸಹ ಜೋರಾಗಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿ ಕೆಲವರು ಹೆಸರಿನ ಜೊತೆಗೆ ಸಾಕಷ್ಟು ಚರ್ಚೆಯಲ್ಲಿರುವುದು ಮಾಜಿ ಸಚಿವ, ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ ಪಾಟೀಲ ಅವರದ್ದು.
ಲಿಂಗಾಯತ ಸಮುದಾಯದ ನಾಯಕರಲ್ಲಿ ಸಧ್ಯ ಸಾಕಷ್ಟು ಚರ್ಚೆಯಲ್ಲಿರುವ ಹೆಸರು ಎಂ.ಬಿ ಪಾಟೀಲರದ್ದು. ರಾಜ್ಯ ರಾಜಕೀಯ ಇತಿಹಾಸ ನೋಡಿದರೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಮುಖ್ಯಮಂತ್ರಿಯಾದವರ ಪಟ್ಟಿ ನೋಡಿದರೆ ಯಾರೆಲ್ಲ ಆಗಿ ಹೋಗಿದ್ದಾರೆ ಅನ್ನೋದು ತಿಳಿಯುತ್ತೆ. ಜೊತೆಗೆ ಲಿಂಗಾಯತ ಸಮುದಾಯದವರು ಬೆಂಬಲಿಸಿದ ನಾಯಕರು ಸಿಎಂ ಹುದ್ದೆಗೆ ಏರಿದ್ದಾರೆ ಅನ್ನೋದು ಸಹ ಗಮನಿಸಬೇಕಾಗುತ್ತೆ.
ಬಿ.ಡಿ ಜತ್ತಿ, ಎಸ್.ಆರ್ ಬೊಮ್ಮಾಯಿ, ಯಡಿಯೂರಪ್ಪ ಸಿಎಂ ಆಗಿದ್ದರು. ಬಸವರಾಜ್ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ. ರಾಮಕೃಷ್ಣ ಹೆಗಡೆ ಸೇರಿ ಇತರೆ ಸಮುದಾಯದ ನಾಯಕರುಗಳು ಲಿಂಗಾಯತ ಸಮುದಾಯದ ಬೆಂಬಲದೊಂದಿಗೆ ಅಧಿಕಾರ ನಡೆಸಿ ಅವರ ವಿಶ್ವಾಸ ಪಡೆದಿದ್ದಾರೆ. ಇವರ ಹಾದಿಯಲ್ಲೇ ಇರುವ ಎಂ.ಬಿ ಪಾಟೀಲರು ಲಿಂಗಾಯತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರು. ಬಸವ ತತ್ವದ ಮೇಲೆ ಕೆಲಸ ಮಾಡುತ್ತಿದ್ದಾರೆ. ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಮಾಡಿದ ಇವರ ಕೆಲಸಗಳು ಜನಾನುರಾಗಿ ಆಗಿವೆ. ಕೋವಿಡ್ ಟೈಂನಲ್ಲಿ ಬಿಎಲ್ ಡಿ ಆಸ್ಪತ್ರೆಯಿಂದ ಕೇವಲ ಶೇ.30ರಷ್ಟು ಫೀಸ್ ಪಡೆದು ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಇವರ ಪುತ್ರ ರಾಹುಲ್, ಎಂ.ಬಿ ಪಾಟೀಲ ಫೌಂಡೇಶನ್ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಾ, ತಂದೆಯ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಸಹ ತೊಡಗಿಸಿಕೊಂಡಿದ್ದಾರೆ.
ಇನ್ನು ಎಚ್.ಡಿ ಕುಮಾರಸ್ವಾಮಿ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ನಾಯಕರನ್ನು ಸಿಎಂ ಮಾಡುತ್ತಾರೆ ಎಂದು ನೀಡಿರುವ ಹೇಳಿಕೆಯಿಂದ, ಕಾಂಗ್ರೆಸ್ ನಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಈ ಬಾರಿ ಚುನಾವಣೆಯಲ್ಲಿ 50-60 ಕಡೆ ತಮಗೆ ಟಿಕೆಟ್ ನೀಡಬೇಕು ಅನ್ನೋ ಬೇಡಿಕೆ ಇಟ್ಟಿದ್ದು, ಒತ್ತಡ ಹೇರುತ್ತಿದ್ದಾರಂತೆ. ಈ ಕುರಿತು ಈಗಾಗ್ಲೇ ಶಾಮನೂರ ಶಿವಶಂಕರಪ್ಪ, ಎಂ.ಬಿ ಪಾಟೀಲ, ಈಶ್ವರ ಖಂಡ್ರೆ, ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಎಂ.ಬಿ ಪಾಟೀಲರಿಗೆ ಈಗಾಗ್ಲೇ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದು, ಉತ್ತರ ಕರ್ನಾಟಕ ಭಾಗದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ನೀಡಬೇಕು ಅನ್ನೋ ಬೇಡಿಕೆ ಈಗಾಗ್ಲೇ ಕೈ ಹೈಕಮಾಂಡ್ ಮುಂದೆ ಇಟ್ಟಿದ್ದಾರಂತೆ. ಹೀಗಾಗಿ ಎಂ.ಬಿ ಪಾಟೀಲರಿಗೆ ಸಿಎಂ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ತುಂಬಾ ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿದ ಎಂ.ಬಿ ಪಾಟೀಲರು ಶಾಸಕರಾಗಿ, ಸಚಿವರಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಇವರ ಕಾರ್ಯಕ್ಕೆ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಅವರು ಮೆಚ್ಚಿಕೊಂಡು ಆಶೀರ್ವಾದ ಮಾಡಿದ್ದರು. ಈಗ ಉತ್ತರ ಕರ್ನಾಟಕ ಭಾಗದ ಖ್ಯಾತ ಬಬಲಾದಿ ಮುತ್ಯಾರು ಸಹ, ಎಂ.ಬಿ ಪಾಟೀಲರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ. ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅನ್ನೋ ಭವಿಷ್ಯ ಸಹ ನುಡಿದಿದ್ದಾರೆ. ಹೀಗಾಗಿ ಇವರು ಸಿಎಂ ಆಗೋ ಲಕ್ಷಣಗಳಿವೆಯಂತೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಗ್ಗೆ ಸ್ವಪಕ್ಷೀಯರಲ್ಲಿಯೇ ಸಹಮತ ಇಲ್ಲವೆಂದು ಹೇಳಲಾಗುತ್ತೆ. ಹೀಗಾಗಿ ಎಂ.ಬಿ ಪಾಟೀಲರ ಪರವಾಗಿ ಕೈ ನಾಯಕರು ನಿಂತುಕೊಳ್ಳಲಿದ್ದು, ಎಂ.ಬಿ ಪಾಟೀಲರು ಮುಖ್ಯಮಂತ್ರಿ ಆಗುತ್ತಾರೆ ಅನ್ನೋ ಮಾತುಗಳು ಜೋರಾಗಿವೆ. ಜೊತೆಗೆ ಬಬಲಾದಿ ಮುತ್ಯಾರ ಭವಿಷ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.