ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಸಿದಂತೆ ವಿಧಾನಸಭೆ ಕಲಾಪದಲ್ಲಿ ವಿಪಕ್ಷಗಳು ವಾಗ್ದಾಳಿ ನಡೆಸಿವೆ. ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಎಲ್ಲ ಶಾಸಕರು, ಸಚಿವರನ್ನು ವಿನಂತಿ ಮಾಡಿಕೊಳ್ಳುತ್ತೀನಿ ಇದು ಸಮರ್ಥನೆ ಮಾಡಿಕೊಳ್ಳುವುದಲ್ಲ. ಹಿಂಗ ನೀವು ಸಮರ್ಥನೆ ಮಾಡಿಕೊಂಡು ಬಂದೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಅನರ್ಹರಾಗಿದ್ದೀರಿ. 2024ರಲ್ಲಿ ಈ ದೇಶದಲ್ಲಿ ನಿಮ್ಮ ಅಸ್ಥಿತ್ವ ಉಳಿಯುವುದಿಲ್ಲ. ಕಾಂಗ್ರೆಸ್ ಒಂದು ರೀತಿಯಲ್ಲಿ ಪಾಕಿಸ್ತಾನದ ಏಜೆಂಟ್ ರಾಗಿ ವರ್ತಿಸುತ್ತಿದೆ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎನ್ನುತ್ತಿದ್ದಂತೆ ಸಚಿವ ಎಂ.ಬಿ ಪಾಟೀಲ ವಾಗ್ದಾಳಿ ನಡೆಸಿದರು.
ಸನ್ಮಾನ್ಯ ಅಧ್ಯಕ್ಷರೆ ಅವರನ್ನು ಕೇಳಿ ಸಿಂದಗಿಯಲ್ಲಿ ಝಂಡಾ ಹಾರಿಸಿದ್ದರು. ಪಾಕಿಸ್ತಾನ್ ಝಂಡಾ ಹಾರಿಸಿ ಆವತ್ತು ಏನು ಹೇಳಿದ್ದರು, ಮುಸಲ್ಮಾನರು ಮಾಡಿದ್ದಾರೆ ಅಂತ್ಹೇಳಿ ಗಲಾಟೆ ಮಾಡಿದರು. ತನಿಖೆ ಆಯಿತು. ಪೊಲೀಸರ ಕೈಗೆ ಸಿಕ್ಕೊಂಡವರು ಯಾರವರು? ಯಾರವರು ನಿಮ್ಗೆ ಗೊತ್ತಿಲ್ವಾ ಬಸನಗೌಡ್ರೆ? ಹೆಸರು ಕೊಡ್ಲೇ ಯಾರದು ಅದು ಷಡ್ಯಂತ್ರ? ಮಾಡೋದು ನೀವು ತೋರಿಸೋದು ಮುಸಲ್ಮಾನರನ್ನ ಎಂದು ಸಚಿವ ಎಂ.ಬಿ ಪಾಟೀಲ ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
ಆಗ ಶಾಸಕ ಯತ್ನಾಳ, ಸಿಂದಗಿಗೆ ಹೋಗಿ ನಾನು ಪ್ರತಿಭಟನೆ ಮಾಡಿದ್ದೇನೆ. ನಾನು ಜೆಡಿಎಸ್ ನಲ್ಲಿದ್ದೆ. ಎಂ.ಬಿ ಪಾಟೀಲರೆ ನೀವು ಹೋರಾಟ ಮಾಡಿಲ್ಲ. ನೀವೇನು ಮಾಡಿದ್ದೀರಿ ಎಂದು ಸಚಿವ ಎಂ.ಬಿ ಪಾಟೀಲಗೆ ಮರು ಪ್ರಶ್ನಿಸಿದರು. ಆಗ ಎಂ. ಬಿ ಪಾಟೀಲ, ಯಾರ ಮೇಲೆ ಹೋರಾಟ ಮಾಡಿದ್ದೀರಿ? ನೀವೇನು ತಿಳ್ಕೊಂಡ್ರಿ ಒಂದು ಕೋಮಿನವರು ಮಾಡಿರಬೇಕೆಂತ ತಿಳ್ಕೊಂಡು ಹೋರಾಟ ಮಾಡೀರಿ. ಸಿಕ್ಕೊಂಡವರು ನಿಮ್ಮವರು ಎಂದು ಕಿಡಿ ಕಾರಿದರು.