ಸಿಂದಗಿ: ಹೊರಗೆ ತಂಪಾದ ಗಾಳಿ.. ಒಳಗೆ ಇಂಪಾದ ಸಂಗೀತ.. ನೋಡುಗರ ಎದೆಯಲ್ಲಿ ಭಾವತರಂಗಗಳ ಆಲಾಪ. ಹೌದು, ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಶಾಸ್ತ್ರೀಯ ಸಂಗೀತ ಸಂಜೆ’ ಇಷ್ಟೆಲ್ಲ ಅನುಭವಕ್ಕೆ ಕಾರಣವಾಯ್ತು.
ಸಂಗಮೇಶ್ವರ ವಿದ್ಯಾಲಯ ಹಾಗೂ ಸಪ್ತಗಿರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸೋಮವಾರ ಸಂಜೆ ನಡೆದ ಶಾಸ್ತ್ರೀಯ ಸಂಗೀತ ಸಂಜೆ, ಸಂಗೀತ ಪ್ರಿಯರ ಹೃನ್ಮನಗಳಿಗೆ ಮುದ ನೀಡಿತು. ಗದುಗಿನ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಅಮರೇಶ ಕೊಂಡಗೂಳಿ ಅವರ ಮಧುರ ಕಂಠದಿಂದ ಹೊರಹೊಮ್ಮಿದ ಗಾಯನ ಎಲ್ಲರ ಮೈ ಮನಗಳನ್ನ ರೋಮಾಂಚನಗೊಳಿಸುವ ಮೂಲಕ ಇಳಿ ಸಂಜೆಯ ಹೊತ್ತಿಗೆ ಸೊಬಗು ತುಂಬಿತು. ಸ್ಥಳೀಯ ಕಲಾವಿದ ಹಾಗೂ ಬರಹಗಾರ ಸಿದ್ದು ಬ್ಯಾಕೋಡ ತಬಲಾ ಹಾಗೂ ಸಂಗೀತ ಶಿಕ್ಷಕ ಎಂ.ಬಿ ಹಲ್ದಿ ಅವರು ಹಾರ್ಮೋನಿಯಂ ಸಾಥ್ ನೀಡಿ, ಗಾಯನಕ್ಕೆ ಮತ್ತಷ್ಟು ಮೆರಗು ತಂದ್ರು.
ರಾಗ ರಂಜನಿ ಸಂಗೀತ ಶಾಲೆಯ ವಿದ್ಯಾರ್ಥಿ ಬಸಲಿಂಗಯ್ಯ ಹಿರೇಮಠ ಸ್ವಾಗತ ಗೀತೆ ಹಾಡಿದ್ರು. ಮಸಾಪ ಅಧ್ಯಕ್ಷ ಅಶೋಕ ಬಿರಾದಾರ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದ್ರು. ಈ ವೇಳೆ ರಾಗ ರಂಜನಿ ಸಂಗೀತ ಶಾಲೆ ನಿರ್ದೇಶಕರಾದ ಡಾ.ಪ್ರಕಾಶ, ಸಂಗಮೇಶ್ವರ ವಿದ್ಯಾಲಯ ಸಂಚಾಲಕ ಗುರುನಾಥ ಅರಳಗುಂಡಗಿ, ಸಂಗೀತ ಶಿಕ್ಷಕರಾದ ಮಹಾಂತೇಶ ನಾಗೋಜಿ, ಮನೋಹರ ಪತ್ತಾರ, ಅರ್ಜುನ ನಾಕಮಾನ, ಕಸಾಪ ಗೌರವ ಕಾರ್ಯದರ್ಶಿ ಡಾ.ಜಿ.ಎಸ್ ಭೂಸಗೊಂಡ, ಶ್ರೀಶೈಲ ಹೂಗಾರ, ಶಾಲೆಯ ಮುಖ್ಯಗುರುಗಳಾದ ಪವನ ಕುಲ್ಕರ್ಣಿ, ವಿಜಯಲಕ್ಷ್ಮಿ ಶಹಾಪೂರ, ವುಡ್ ಕಲಾವಿದ ಈರಣ್ಣ ಬಡಿಗೇರ, ಶಿಕ್ಷಕರಾದ ಬಸವರಾಜ ಅಗಸರ, ವಿ.ಎಸ್ ಪಾಟೀಲ, ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ರು.