ಪ್ರಜಾಸ್ತ್ರ ಸುದ್ದಿ
ಜೈಪುರ: ರಾಜಸ್ಥಾನ ಕಾಂಗ್ರೆಸ್ ರಾಜಕೀಯದಲ್ಲಿ ಬಿರುಕು ಮೂಡಿದೆ. ಹೀಗಾಗಿ ಸರ್ಕಾರಕ್ಕೆ ಕಂಟಕ ಎದುರಾಗಿದ್ದು ಸಿಎಂ ಅಶೋಕ ಗೆಹ್ಲೋಟ್ ವಿರುದ್ಧ ಯುವ ನಾಯಕ ಸಿಂಧಿಯಾ ತಿರುಗಿಬಿದ್ದಿದ್ದಾರೆ. ಇದೀಗ ಬಿಎಸ್ಪಿ ಸಹ ಕಾಂಗ್ರೆಸ್ ವಿರುದ್ಧ ಮತಚಲಾಯಿಸಲು ವಿಪ್ ಜಾರಿ ಮಾಡಿದೆ.
ಒಂದು ವೇಳೆ ಬಹುಮತ ಸಾಬೀತಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮತಯಾಚನೆ ಪ್ರಕ್ರಿಯೆ ನಡೆದ್ರೆ, ತನ್ನ 6 ಜನ ಶಾಸಕರು ಕಾಂಗ್ರೆಸ್ ವಿರುದ್ಧ ಮತ ಹಾಕಬೇಕೆಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ ಚಂದ್ರ ಮಿಶ್ರಾ ವಿಪ್ ಜಾರಿ ಮಾಡಿದ್ದಾರೆ. ಒಂದು ವೇಳೆ ವಿಪ್ ಉಲ್ಲಂಘಿಸಿದ್ರೆ 6 ಜನ ಶಾಸಕರು ಅನರ್ಹರಾಗಲು ಅವರೆ ಹೊಣೆಗಾರರು ಎಂದು ಹೇಳಿದೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಖನ್ ಮೀನಾ, ಸಂದೀಪ ಯಾದವ, ಜೋಗೇಂದ್ರ ಅವನಾ, ವಾಜಿಬ್ ಅಲಿ, ರಾಜೇಂದ್ರ ಗುಧಾ ಹಾಗೂ ದೀಪಚಂದ ಖೇರಿಯಾ ಬಿಎಸ್ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ಈ 6 ಜನ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಈ ಮೂಲಕ ಬಿಎಸ್ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.