ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಳೆದ 39 ದಿನಗಳಿಂದ ಹೋರಾಟ ಮಾಡುತ್ತಿರುವ ಕುಸ್ತಿಪಟುಗಳು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದ್ದಾರೆ. ಎಫ್ಐಆರ್ ವಾಪಸ್ ಪಡೆದಿದ್ದಾರೆ ಅಂತೆಲ್ಲ ಸುದ್ದಿ ಹರಿದಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಸ್ತಿಪಟುಗಳು ಕೆಲ ಮಾಧ್ಯಮಗಳಲ್ಲಿ ಬರುತ್ತಿರುವುದು ಸುಳ್ಳು ಸುದ್ದಿ. ನಾವು ಪ್ರತಿಭಟನೆ ವಾಪಸ್ ಪಡೆದಿಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರೆದಿದೆ ಎಂದಿದ್ದಾರೆ.
ಈ ಕುರಿತು ಸಾಕ್ಷಿ ಮಲಿಕ್ ಹಾಗೂ ಭಜರಂಗ್ ಪೂನಿಯಾ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು, ಕುಸ್ತಿಪಟುಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಅನ್ನೋದು ಸಂಪೂರ್ಣ ಸುಳ್ಳು. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿ ಮುಂದುವರೆಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ.
ಚಳವಳಿಯಿಂದ ಹಿಂದೆ ಸರಿದಿದ್ದೇವೆ ಅನ್ನೋದು ಸುಳ್ಳು. ನಮಗೆ ಹಾನಿ ಮಾಡಲು ಈ ರೀತಿ ಸುದ್ದಿ ಹಬ್ಬಿಸಲಾಗಿದೆ. ನ್ಯಾಯ ಸಿಗುವ ತನಕ ಹೋರಾಟ ನಡೆಯುತ್ತದೆ ಎಂದು ಭಜರಂಗ್ ಪೂನಿಯಾ ಟ್ವೀಟ್ ಮಾಡಿದ್ದಾರೆ.
ಕುಸ್ತಿಪಟುಗಳ ಹೋರಾಟಕ್ಕೆ ರೈತ ಪರ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ನಮ್ಮ ಹೋರಾಟ ಎಂದಿದ್ದಾರೆ. ಆದರೆ, ಕೇಂದ್ರದ ಮೋದಿ ಸರ್ಕಾರ ಇದ್ಯಾವುದಕ್ಕೂ ಕ್ಯಾರೆ ಅಂತಿಲ್ಲ.