ಪ್ರಜಾಸ್ತ್ರ ಸುದ್ದಿ
ನವದೆಹಲಿ: ಅಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾನೂನು ವಿರುದ್ಧ ಭರ್ಜರಿ ಒಂದು ವರ್ಷಕ್ಕೂ ಅಧಿಕ ಕಾಲ ದೊಡ್ಡ ಮಟ್ಟದ ಹೋರಾಟ ನಡೆಯಿತು. ನೂರಾರು ರೈತರು ಪ್ರಾಣ ಕಳೆದುಕೊಂಡರು. ಅವರ ಹೋರಾಟ ಹತ್ತಿಕ್ಕಿಲು ಕೇಂದ್ರ ಸರ್ಕಾರ ಅತ್ಯಂತ ಕೆಳಮಟ್ಟದ ಕೆಲಸವನ್ನು ಮಾಡಿತು. ಕೊನೆಗೆ ರೈತರ ಮುಂದೆ ಮಂಡಿಯೂರಿತು. ಈಗ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳು ಪೊಲೀಸರ ಬೂಟಿನೇಟಿಗೆ ಬಲಿಯಾಗುತ್ತಿದ್ದಾರೆ.
ಭಾರತೀಯ ಕುಸ್ತಿ ಫಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಹೀಗಾಗಿ ಕಳೆದ ಏಪ್ರಿಲ್ 23ರಿಂದ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದ್ಯಾವುದಕ್ಕೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ಯಾರೆ ಅಂತಿಲ್ಲ.
ಕಾಮನ್ ವೆಲ್ತ್ ಸೇರಿ ವಿಶ್ವ ಚಾಂಪಿಯನ್ ಶಿಪ್ ಮಟ್ಟದಲ್ಲಿ ಪದಕ ತಂದ ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಪೊಗೆಟ್, ಸಂಗೀತಾ ಪೊಗೆಟ್ ಸೇರಿ ನೂರಾರು ಕ್ರೀಡಾಪಟಗಳು ಜಂತರ್ ಮಂತರ್ ಸ್ಥಳದಿಂದ ಸಂಸತ್ ಭವನದತ್ತ ತೆರಳುತ್ತಿದ್ದಾಗ ಭಾನುವಾರ ಪೊಲೀಸರೊಂದಿಗೆ ದೊಡ್ಡ ಹೋರಾಟ ನಡೆಯಿತು. ಇಡೀ ಪ್ರತಿಭಟನಾ ಸ್ಥಳವನ್ನು ನಾಶ ಪಡಿಸಲಾಗಿದೆ. ತಳ್ಳಾಟ, ನೂಕಾಟವಾಗಿ ಕುಸ್ತಿಪಟುಗಳು ರಸ್ತೆಯ ಮೇಲೆ ಬಿದ್ದು ಒದ್ದಾಡಿದರು.
ನಾವು ಇಲ್ಲಿ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದರೆ, ಆರೋಪಿ ಮಾತ್ರ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ. ಆತನಿಗೆ ಸರ್ಕಾರ ಆಶ್ರಯ ನೀಡಿದೆ. ನಮ್ಮನ್ನು ಜೈಲಿಗೆ ಹಾಕಲಾಗುತ್ತಿದೆ ಎಂದು ಕುಸ್ತಿಪಟುಗಳು ದೂರಿದರು.